ರಾಜ್ಯದಲ್ಲಿ ಲಾಕ್ಡೌನ್ ಭಾಗಶಃ ತೆರವು?
Team Udayavani, Apr 28, 2020, 6:35 AM IST
ಬೆಂಗಳೂರು: ರಾಜ್ಯದ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಮೈಸೂರು ವ್ಯಾಪ್ತಿಯಲ್ಲಿ ಹೆಚ್ಚಾಗಿ ಕೋವಿಡ್ 19 ಸೋಂಕಿತ ಪ್ರಕರಣಗಳು ವರದಿ ಯಾಗುತ್ತಿರುವುದರಿಂದ ಲಾಕ್ಡೌನ್ ಮುಂದುವರಿಕೆ ಸೂಕ್ತ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ.
ಆದರೆ ಹಾಟ್ಸ್ಪಾಟ್ ಹೊರತುಪಡಿಸಿದ ಪ್ರದೇಶಗಳ ವಿಚಾರದಲ್ಲಿ ತಜ್ಞರ ಅಭಿಪ್ರಾಯ ಪಡೆದು ಮುಂದುವರಿಯಲು ಸಲಹೆ ನೀಡಿದ್ದಾರೆಂದು ಹೇಳಲಾಗಿದೆ. ಪ್ರಧಾನಿ ನಡೆ ಸಿದ ವೀಡಿಯೋ ಕಾನ್ಫರೆನ್ಸ್ನಲ್ಲಿ ಭಾಗಿಯಾಗಿದ್ದ ಸಿಎಂ ಯಡಿಯೂರಪ್ಪ ಅವರಿಂದ ರಾಜ್ಯದಲ್ಲಿ ಕೋವಿಡ್ 19 ಸ್ಥಿತಿಗತಿ ಮತ್ತು ಕ್ರಮಗಳ ಬಗ್ಗೆ ಮೋದಿ ಮಾಹಿತಿ ಪಡೆದರು. ಬಳಿಕ ಲಾಕ್ಡೌನ್ ಅವಧಿ ಮತ್ತಷ್ಟು ಮುಂದುವರಿಸಬಹುದೇ ಎಂದು ಕೇಳಿದರು ಎಂದು ತಿಳಿದು ಬಂದಿದೆ.
ಹಾಟ್ಸ್ಪಾಟ್ ಪ್ರದೇಶಗಳಲ್ಲಿ ಮೇ 17ರವರೆಗೆ ಲಾಕ್ಡೌನ್ ಮುಂದುವರಿಸಿ, ಉಳಿದೆಡೆ ಷರತ್ತುಗಳೊಂದಿಗೆ ತೆರವು ಮಾಡುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
ಡಿಸಿಗಳ ಜತೆ ಮಾತುಕತೆ
ರಾಜ್ಯದೆಲ್ಲೆಡೆ ಲಾಕ್ಡೌನ್ ಮುಂದುವರಿಸಿದರೂ ಎದುರಾಗಬಹುದಾದ ಸಾಧಕ ಬಾಧಕಗಳ ಬಗ್ಗೆಯೂ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿಗಳಿಗೆ ಲಾಕ್ಡೌನ್ ಸಡಿಲಿಕೆ ಸಂಬಂಧ ಅಧಿಕಾರ ನೀಡುವ ಕುರಿತು ಸಂವಾದದಲ್ಲಿ ಪ್ರಸ್ತಾವವಾಗಿದೆ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಸಿಎಂ ಬಿಎಸ್ವೈ ಅವರು, ಸಂವಾದದ ಅನಂತರ ತತ್ಕ್ಷಣ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ. ಸಿಇಒ, ಆರೋಗ್ಯ ಅಧಿಕಾರಿಗಳ ಜತೆ ಸಂಜೆ ದಿಢೀರ್ ವೀಡಿಯೋ ಕಾನ್ಫರೆನ್ಸ್ ನಡೆಸಿ ಅಭಿಪ್ರಾಯ ಪಡೆದರು ಎಂದು ಹೇಳಲಾಗಿದೆ.
ಅಧಿಕಾರಿಗಳು ಮತ್ತು ಸಚಿವರು ರಾಜ್ಯಾದ್ಯಂತ ಲಾಕ್ಡೌನ್ ಮುಂದುವರಿಕೆ ಬೇಡ ಎಂಬ ಅಭಿಪ್ರಾಯ ಹೊಂದಿದ್ದಾರೆ. ಆದರೆ ಬೆಂಗಳೂರು ಸಹಿತ ರಾಜ್ಯದಲ್ಲಿನ ಪರಿಸ್ಥಿತಿ ಮಾಹಿತಿ ಪಡೆದಿರುವ ಪ್ರಧಾನಿ ಲಾಕ್ಡೌನ್ ಮುಂದುವರಿಕೆಗೆ ಒಲವು ವ್ಯಕ್ತಪಡಿಸಿರುವುದರಿಂದ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.