ವಸತಿ ನಿಲಯಕ್ಕೆ ಲೋಕಾಯುಕ್ತರ ಭೇಟಿ
Team Udayavani, Nov 23, 2019, 3:03 AM IST
ಉಡುಪಿ: ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಅವರು ಶುಕ್ರವಾರ ಕುಂಜಿಬೆಟ್ಟುವಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಸತಿ ನಿಲಯ ಹಳೆಯದ್ದಾಗಿದ್ದು, ಹೊಸ ಕಟ್ಟಡ ನಿರ್ಮಿಸುವ ಬಗ್ಗೆ ಅಧಿಕಾರಿಗಳಲ್ಲಿ ವಿಚಾರಿಸಿದರು.
ವಸತಿ ನಿಲಯದ ಜಾಗ ಭೂ ವಿವಾದದಲ್ಲಿ ಇರುವುದರಿಂದ ನೂತನ ಕಟ್ಟಡ ನಿರ್ಮಿಸಲು ಅಡ್ಡಿಯಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಉಪ ನಿರ್ದೇಶಕ ರಮೇಶ್ ಅವರು ಲೋಕಾಯುಕ್ತರಿಗೆ ವಿವರಿಸಿದರು. ಹಾಸ್ಟೆಲ್ ಸುತ್ತ 7.88 ಎಕರೆ ಸರಕಾರಿ ಜಾಗದಲ್ಲಿ 70 ಸೆಂಟ್ಸ್ ಕಾಂಪೌಂಡ್ನಲ್ಲಿ ಹಾಸ್ಟೆಲ್ ನಡೆಸಲಾಗುತ್ತಿದೆ ಉಳಿದ ಜಾಗ ವಿವಾದದಲ್ಲಿದೆ ಎಂದರು.
ಈ ಬಗ್ಗೆ ದಾಖಲೆ ಸಹಿತ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಲೋಕಾಯುಕ್ತರು ಸೂಚಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ವಹಿಸುವುದಾಗಿ ಜಿಲ್ಲಾಧಿಕಾರಿ.ಜಿ.ಜಗದೀಶ್ ಲೋಕಾಯುಕ್ತರಿಗೆ ತಿಳಿಸಿದರು. ವಸತಿ ನಿಲಯ ಆವರಣದಲ್ಲಿ ಬಾಲಕರಿಗೆ ವಿತರಿಸಲು ನಿಲ್ಲಿಸಲಾಗಿದ್ದ ಸೈಕಲ್ಗಳನ್ನು ಲೋಕಾಯುಕ್ತರು ಮುಟ್ಟಿ ಪರಿಶೀಲಿಸಿದರು. ಯಾವ ಸಂಸ್ಥೆಯ ಸೈಕಲ್ ಮತ್ತು ಸೈಕಲ್ ಗುಣಮಟ್ಟದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.