ಮದುವೆ ನಿಶ್ಚಯದ ಬಳಿಕ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಿಯಕರ; ಮನನೊಂದು ಪ್ರಿಯತಮೆ ಆತ್ಮಹತ್ಯೆ
ಎರಡೂ ಕಡೆಯವರು ಒಪ್ಪಿದ ಪ್ರೀತಿಯನ್ನು ವಿಧಿ ಒಪ್ಪಲಿಲ್ಲ
Team Udayavani, May 15, 2022, 5:20 PM IST
ತುಮಕೂರು: ಪ್ರೀತಿಸಿ, ಮನೆಯವರನ್ನೂ ಒಪ್ಪಿಸಿ ಮದುವೆ ನಿಶ್ಚಯ ಮಾಡಿಕೊಂಡಿದ್ದ ಜೋಡಿಯೊಂದು ಧಾರಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಪ್ರಿಯಕರ ಅಪಘಾತದಲ್ಲಿ ಮೃತಪಟ್ಟರೆ, ಪ್ರಿಯತಮೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಏನಿದು ಘಟನೆ?: ತುಮಕೂರು ತಾಲ್ಲೂಕು ಅರೆಹಳ್ಳಿ ಗ್ರಾಮದ ಸುಷ್ಮಾ(22) ಹಾಗೂ ಮಸ್ಕಲ್ ಗ್ರಾಮದ ಧನುಷ್(23) ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬೆಂಗಳೂರಿನಲ್ಲಿ ಸ್ವಂತ ಬಟ್ಟೆ ಅಂಗಡಿ ನಡೆಸುತ್ತಿದ್ದ ಧನುಷ್, ಯುವತಿಯ ಮನೆಯವರನ್ನು ಒಪ್ಪಿಸಿ ಪ್ರಿಯತಮೆಯೊಂದಿಗೆ ಮದುವೆ ನಿಶ್ಚಯ ಮಾಡಿಕೊಂಡಿದ್ದನು. ಆದರೆ ವಿಧಿ ಲಿಖಿತ ಬೇರೆಯೇ ಇತ್ತು. ಮನೆಯವರನ್ನು ಒಪ್ಪಿಸಿ ಮದುವೆಯಾಗಬೇಕಿದ್ದ ಸುಂದರ ಜೋಡಿ ಸಾವಿನಲ್ಲಿ ಒಂದಾಗಿದ್ದಾರೆ.
ಅಪಘಾತದಲ್ಲಿ ಸಾವು; ಮೇ 11ರಂದು ಊರಿನ ಜಾತ್ರೆಗೆಂದು ಬರುತ್ತಿದ್ದ ಧನುಷ್ ನೆಲಮಂಗಲದ ಕುಲಾನಹಳ್ಳಿ ಬಳಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾನೆ. ಪ್ರಿಯಕರನ ಸಾವಿನ ಸುದ್ದಿ ತಿಳಿದು ಸುಷ್ಮಾ ತೀವ್ರ ಅಘಾತಕ್ಕೀಡಾಗಿದ್ದಳು. ಪ್ರಿಯಕರನ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದ ಸುಷ್ಮಾ ತಾನೂ ಆತನನ್ನು ಹಿಂಬಾಲಿಸಿದ್ದಾಳೆ.
ಆತ್ಮಹತ್ಯೆಗೆ ಶರಣು; ಪ್ರೀತಿಸಿ ಮದುವೆಯಾಗಬೇಕಿದ್ದ ತನ್ನೊಲವಿನ ಇನಿಯ ಇನ್ನಿಲ್ಲ ಎಂಬ ಸುದ್ದಿಯನ್ನು ಸುಷ್ಮಾಗೆ ಅರಗಿಸಿಕೊಳ್ಳಲಾಗಲಿಲ್ಲ. ಧನುಷ್ ಸಾವಿನಿಂದ ತೀವ್ರ ನೊಂದಿದ್ದ ಸುಷ್ಮಾ ತಾನು ಕೂಡ ಆತನೊಂದಿಗೆ ತೆರಳಲು ನಿರ್ಧರಿಸಿದ್ದಾಳೆ. ಅದರಂತೆ ಅಂತ್ಯ ಸಂಸ್ಕಾರ ಮುಗಿಸಿ ಬಂದವಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪೋಷಕರು ನಾಲ್ಕೈದು ಆಸ್ಪತ್ರೆ ಸುತ್ತಿದರೂ ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ 8 ಗಂಟೆ ಸಮಯದಲ್ಲಿ ಸುಷ್ಮಾ ಕೊನೆಯುಸಿರೆಳೆದಿದ್ದಾಳೆ.
ದುರಂತ ಪ್ರೇಮ; ಎಂಕಾಂ ಓದುತ್ತಿದ್ದ ಸುಷ್ಮಾ ಮತ್ತು ಸ್ವಂತ ಬಟ್ಟೆ ಅಂಗಡಿ ಹೊಂದಿದ್ದ ಧನುಷ್ ಪ್ರೀತಿ ವಿಚಾರ ಎರಡೂ ಮನೆಯವರಿಗೆ ಗೊತ್ತಿತ್ತು. ಮಕ್ಕಳು ಚೆನ್ನಾಗಿ ಬಾಳಲಿ ಎಂದು ಎರಡೂ ಕಡೆಯವರು ಮದುವೆಗೆ ಒಪ್ಪಿದ್ದರು. ಪ್ರೀತಿಸಿ, ಮನೆಯವರನ್ನು ಒಪ್ಪಿಸಿ ಗೆದ್ದು ಬೀಗಿದ್ದ ಜೋಡಿ ಹಕ್ಕಿಗಳು ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನು ಕಂಡಿದ್ದರು. ಆದರೆ ವಿಧಿ ಬೇರೆಯದ್ದೇ ಆಟ ಆಡಿದೆ. ಬಾಳಿ ಬದುಕಬೇಕಿದ್ದ ಜೋಡಿಯ ಪ್ರೇಮ ಕಥೆ ದುರಂತ ಅಂತ್ಯ ಕಂಡಿದ್ದು ವಿಪರ್ಯಾಸ.
ಈ ಸಂಬಂಧ ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.