ಸ್ವಾರ್ಥಕ್ಕಾಗಿ ಕೆಲವರು ಸಿಎಂ ಮೇಲೆ ಆರೋಪ ಮಾಡ್ತಿದ್ದಾರೆ, ಇದು ಒಳ್ಳೆಯದಲ್ಲ: ರೇಣುಕಾಚಾರ್ಯ
Team Udayavani, Jan 5, 2021, 1:13 PM IST
ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕುಟುಂಬ, ಮಕ್ಕಳು ಯಾರೂ ಕೂಡಾ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಕೇವಲ ನಾಟಕಕ್ಕೋಸ್ಕರ ಯಾರೂ ನಾಟಕ ಮಾಡಬಾರದು. ಯಾರೇ ಸಿಎಂ ವಿರುದ್ದ ಟೀಕೆ ಮಾಡಿದರೂ ಒಳ್ಳೆಯದಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ಶಾಸಕ ಬಸನಗೌಡ ಯತ್ನಾಳ್ ಹೆಸರು ಹೇಳದೆ ಅವರ ವಿರುದ್ಧ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಸಿಎಂ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಸಿಎಂ ಜೊತೆ ಮೂರು ವಿಭಾಗಗಳ ಶಾಸಕರ ಸಭೆ ನಡೆಯಿತು. ಶಾಸಕರು ಅವರ ಭಾವನೆಗಳನ್ನು ಹೇಳಿಕೊಂಡಿದ್ದಾರೆ. ಕೋವಿಡ್ ಸಂಧರ್ಭದಲ್ಲಿ ಆರ್ಥಿಕ ಸಂಕಷ್ಟ ಇದ್ದರೂ ಶಕ್ತಿ ಮೀರಿ ಸಹಾಯ ಮಾಡಿದ್ದೇನೆ ಎಂದು ಸಿಎಂ ಹೇಳಿದರು ಎಂದರು.
ನಾನು ಯಡಿಯೂರಪ್ಪ ಪರ ಇದ್ದೇನೆ ಎಂದು ನಾನು ಹೇಳುವುದಲ್ಲ. ಆದರೆ ಸಿಎಂ ನಮ್ಮನ್ನು ಬೆಳೆಸಿದಿವರು, ತಂದೆ ಸಮಾನ. ಯಡಿಯೂರಪ್ಪರನ್ನು ಎಲ್ಲರೂ ಗೌರವಿಸಬೇಕು. ಆಡಳಿತದಲ್ಲಿ ಯಡಿಯೂರಪ್ಪ ಕುಟುಂಬದ ಹಸ್ತಕ್ಷೇಪ ಯಾವುದೂ ಇಲ್ಲ. ಇದೆಲ್ಲ ಊಹಾಪೋಹಾ ಎಂದರು.
ಇದನ್ನೂ ಓದಿ:ಇನ್ನೆರಡು ಮೂರು ದಿನಗಳಲ್ಲಿ ನೀನು ಮಂತ್ರಿ ಆಗ್ತೀಯ : ಆರ್ ಶಂಕರ್ ಗೆ ಸಿಎಂ ಶುಭನುಡಿ
ವಿಜಯೇಂದ್ರ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ. ಯಾರೂ ನಾಟಕ ಮಾಡಬಾರದು. ಕೆಲವರು ಸ್ವಾರ್ಥಕ್ಕಾಗಿ ಯಡಿಯೂರಪ್ಪ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಸಿಎಂ, ಪಕ್ಷದ ಬಗ್ಗೆ ಬಹಿರಂಗ ಮಾತಾಡದಂತೆ ಹೈಕಮಾಂಡ್ ಸೂಚಿಸಿದೆ. ಬಹಿರಂಗವಾಗಿ ಮಾತಾನಾಡಿದರೆ ಶಿಸ್ತು ಕ್ರಮ ತಗೋಳುವುದಾಗಿ ಹೇಳಿದ್ದಾರೆ. ನಾನು ಯಾರ ಹೆಸರೂ ಹೇಳಿ ಈ ಮಾತು ಹೇಳುತ್ತಿಲ್ಲ. ಯಾರೇ ಇದ್ದರೂ ಬಹಿರಂಗ ಮಾತನಾಡುವುದು ಸರಿಯಲ್ಲ. ಇವರು ಸ್ವಾರ್ಥ ಇದ್ದಾಗ ವಿಜಯೇಂದ್ರ ಬಳಿ ಹೋಗುತ್ತಾರೆ. ಆದರೆ ಬೇಡವಾದಾಗ ಆರೋಪ ಮಾಡುತ್ತಾರೆ, ಇದು ಸರಿಯಲ್ಲ. ಇದು ಒಳ್ಳೆಯದಲ್ಲ ಎಂದು ಯತ್ನಾಳ್ ವಿರುದ್ಧ ಪರೋಕ್ಷ ಟೀಕೆ ಮಾಡಿದರು.
ಸಂಪುಟ ವಿಸ್ತರಣೆ ಬಗ್ಗೆ ರಾಷ್ಟ್ರೀಯ ನಾಯಕರು ಸೂಚನೆ ನೀಡಿದ್ದಾರೆ. ತಾಳ್ಮೆಯಿಂದ ಕಾಯಬೇಕು. ಎರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಆಗುತ್ತದೆ ಎಂದದು ಎಲ್ಲೂ ಹೇಳಿಲ್ಲ. ಪಾಪ ಕೆಲವರು ರಾಜೀನಾಮೆ ಕೊಟ್ಟು ಬಂದಿದ್ದಾರೆ. ನನಗಂತೂ ಯಾವುದೇ ಆತುರವಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.