ಬೈಕ್ ಏರಿದವರಿಗೆ ಬಂಧನ ಬಿಸಿ
Team Udayavani, Sep 7, 2017, 6:00 AM IST
ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಮಂಗಳೂರು ಚಲೋ ಹೋರಾಟಕ್ಕೆ ಮಂಗಳವಾರ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಆದ ಪರಿಸ್ಥಿತಿಯೇ ಬುಧವಾರ ರಾಜ್ಯದ ಇತೆರೆಡೆಗಳಲ್ಲೂ ಆಗಿದೆ.
ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಬೈಕ್ ರ್ಯಾಲಿ ತಡೆದ ಪೊಲೀಸರು ಬಿಜೆಪಿ ಮುಖಂಡರು ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಆದರೆ, ಪೊಲೀಸರು ಅನುಮತಿ ನಿರಾಕರಿಸಿದರೂ ಮಂಗಳೂರಿನಲ್ಲಿ ಗುರುವಾರ ರ್ಯಾಲಿ ನಡೆಸಲು ಬಿಜೆಪಿ ಮುಂದಾಗಿದ್ದು, ಇದರಿಂದ ಮತ್ತೆ ಸಂಘರ್ಷದ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇದೆ.
ಮಂಗಳೂರು ರ್ಯಾಲಿಗೆ ನಾವು ರಕ್ಷಣೆ ಕೇಳಿದ್ದೇವೆಯೇ ಹೊರತು ಅನುಮತಿ ಕೇಳಿಲ್ಲ. ಈಗಾಗಲೇ ನಿರ್ಧರಿಸಿದಂತೆ ಮಂಗಳೂರಿನ ಜ್ಯೋತಿ ಸರ್ಕಲ್ನಿಂದ ಬೈಕ್ ರ್ಯಾಲಿ ಮತ್ತು ಪಾದಯಾತ್ರೆ ನಡೆಸಿಯೇ ಸಿದ್ಧ. ಬಹಿರಂಗ ಸಭೆ ಜತೆಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದ್ದಾರೆ. ಅಲ್ಲದೆ, ಬೈಕ್ ರ್ಯಾಲಿ ತಡೆದ ಸರ್ಕಾರದ ವಿರುದ್ಧ ಇನ್ನಷ್ಟು ತೀವ್ರತರದ ಹೋರಾಟ ನಡೆಸುವ ಕುರಿತು ಗುರುವಾರ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.
ಅತ್ತ ಮಂಗಳೂರಿನಲ್ಲಿ ಬಿಜೆಪಿ ಬೈಕ್ ರ್ಯಾಲಿ ಮತ್ತು ಪಾದಯಾತ್ರೆ ತಡೆಯಲು ಪೊಲೀಸರು ಮುಂದಾಗಿದ್ದು, ಬಿಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ. ರ್ಯಾಲಿ ನಡೆಸಲು ಮುಂದಾಗುವವರನ್ನು ಬಂಧಿಸಲು ಕೂಡ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಮಧ್ಯೆ ಬಹಿರಂಗ ಸಭೆಗೆ ಬಿಜೆಪಿ ಭಾರೀ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಕರೆತರುವ ಪ್ರಯತ್ನವೂ ಆಗುತ್ತಿದೆ.
ಮುಂದುವರಿದ ಬಂಧನ ಪ್ರಕ್ರಿಯೆ: ಮಂಗಳೂರು ಚಲೋ ಬೈಕ್ ರ್ಯಾಲಿಗೆ ಮುಂದಾದವರ ಬಂಧನ ಪ್ರಕ್ರಿಯೆ ಮುಂದುವರಿದಿದೆ. ಬುಧವಾರ ಮೈಸೂರಿನಲ್ಲಿ ನಿಷೇದಾಜ್ಞೆ ನಡುವೆಯೂ ರ್ಯಾಲಿಗೆ ಮುಂದಾಗಿದ್ದ ರಾಜ್ಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷರೂ ಆಗಿರುವ ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಎಸ್.ಎ.ರಾಮದಾಸ್ ಸೇರಿದಂತೆ ಬಿಜೆಪಿಯ ನೂರಾರು ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ. ಅದೇ ರೀತಿ ಶಿವಮೊಗ್ಗದಲ್ಲಿ ರ್ಯಾಲಿ ನಡೆಸಲು ಹೊರಟ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕ ಬಿ.ವೈ.ರಾಘವೇಂದ್ರ, ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ.ರವಿ ಸೇರಿದಂತೆ ಸಾವಿರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಬೈಕ್ ರ್ಯಾಲಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ರಾಜ್ಯದ ವಿವಿಧೆಡೆಗಳಿಂದ ನೂರಾರು ಕಾರ್ಯಕರ್ತರು ಬೈಕ್ಗಳಲ್ಲಿ ಮಂಗಳೂರಿನತ್ತ ತೆರಳಲು ಪ್ರಯತ್ನಿಸಿದರು. ಆದರೂ ಅವರು ಜಿಲ್ಲಾ ಕೇಂದ್ರಗಳಿಂದ ಹೊರಹೋಗದಂತೆ ನಿರ್ಬಂಧಿಸಲಾಯಿತು. ಪೊಲೀಸರ ಕಣ್ತಪ್ಪಿಸಿ ಕೆಲವರು ದಕ್ಷಿಣ ಕನ್ನಡ ಜಿಲ್ಲೆಯ ಗಡಿಯತ್ತ ತೆರಳಿದರಾದರೂ ಗಡಿ ಭಾಗದ ತಾಲೂಕುಗಳಲ್ಲಿ ಅವರನ್ನು ಬಂಧಿಸಲಾಯಿತು.
ಮಂಗಳೂರು ಚಲೋ ಜತೆ ಧ್ವನಿಸಿದ ಗೌರಿ ಲಂಕೇಶ್ ಹತ್ಯೆ ಪ್ರಕರಣ
ರಾಜ್ಯದಲ್ಲಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಪ್ರಕರಣಗಳಲ್ಲಿ ಶಾಮೀಲಾಗಿರುವ ಪಿಎಫ್ಐ ಮತ್ತು ಕೆಎಫ್ಡಿ ಸಂಘಟನೆಗಳನ್ನು ನಿಷೇಧಿಸಬೇಕು ಮತ್ತು ಇವುಗಳಿಗೆ ಕುಮ್ಮಕ್ಕು ನೀಡುತ್ತಿರುವ ಸಚಿವ ರಮಾನಾಥ್ ರೈ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಮಂಗಳೂರು ಚಲೋ ಹೋರಾಟ ಹಮ್ಮಿಕೊಂಡಿರುವ ಬಿಜೆಪಿ, ಇದೀಗ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂಬ ಒತ್ತಾಯವನ್ನೂ ಈ ಹೋರಾಟದಲ್ಲಿ ಸೇರಿಸಿಕೊಂಡಿದೆ.
ಗೌರಿ ಲಂಕೇಶ್ ಹತ್ಯೆ ಹಿಂದೆ ಹಿಂದೂಪರ ಸಂಘಟನೆಗಳ ಕೈವಾಡವಿದೆ ಎಂದು ಶಂಕಿಸುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ಇದರಲ್ಲಿ ರಾಜಕೀಯ ಲಾಭ ಪಡೆಯುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ಪ್ರಕರಣದ ಸತ್ಯಾಸತ್ಯತೆ ಹೊರಬಂದು ಆರೋಪಿಗಳು ಶೀಘ್ರ ಬಂಧನಕ್ಕೊಳಗಾಗಬೇಕು. ಅದಕ್ಕಾಗಿ ಸಿಬಿಐ ತನಿಖೆ ನಡೆಸಬೇಕು ಎಂದು ಮಂಗಳೂರು ಚಲೋ ಹೋರಾಟದ ವೇಳೆ ಒತ್ತಾಯಿಸಲಿದೆ.