ಬೆಳಗಾವಿಯಲ್ಲಿ ಮಹಾ ಸಿಎಂ ಪ್ರತಿಕೃತಿ ದಹಿಸಿ ಪ್ರತಿಭಟನೆ
Team Udayavani, Dec 29, 2019, 3:00 AM IST
ಬೆಳಗಾವಿ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚುವ ಮೂಲಕ ವಿವಾದದ ಬೆಂಕಿ ಹೊತ್ತಿಸಿದ್ದು, ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಪ್ರತಿಕೃತಿ ದಹಿಸಿ ಮರಾಠಿ ನಾಮಫಲಕವುಳ್ಳ ಅಂಗಡಿ ನಾಮಫಲಕಕ್ಕೆ ಕಲ್ಲು ತೂರಿದ್ದಾರೆ.
ಎರಡು ದಿನಗಳ ಹಿಂದೆ ಮಹಾರಾಷ್ಟ್ರ ಏಕೀಕರಣ ಸಮಿತಿ ನಾಯಕರನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬ ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಹೇಳಿಕೆ ವಿರುದ್ಧ ಪ್ರತಿಭಟಿಸಿದ ಶಿವಸೇನೆ ಕಾರ್ಯಕರ್ತರು, ಕೊಲ್ಲಾಪುರದ ಕಾಗಲ್ನಲ್ಲಿ ಭೀಮಾಶಂಕರ ಪ್ರತಿಕೃತಿ ಮೇಲೆ ಕನ್ನಡ ಧ್ವಜವಿಟ್ಟು ಬೆಂಕಿ ಹಚ್ಚಿದ್ದಾರೆ.
ಶಿವಸೇನಾ ಜಿಲ್ಲಾಧ್ಯಕ್ಷ ವಿಜಯ ದೇವಣೆ ನೇತೃತ್ವದಲ್ಲಿ ನೂರಾರು ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಗಡಿ ಭಾಗದಲ್ಲಿ ಮತ್ತೆ ಗಡಿ ವಿವಾದ ಕುರಿತು ಎದ್ದಿರುವ ಪ್ರತಿಭಟನೆಯಿಂದ ರಾಜ್ಯದ ಕೊಗನ್ನೊಳ್ಳಿ ಟೋಲ್ ನಾಕಾ ಬಳಿ ನಿಪ್ಪಾಣಿ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದಾರೆ.