ಒಕ್ಕಲಿಗರ ಮತಕ್ಕಾಗಿ “ಮಾಸ್ಟರ್ ಪ್ಲ್ಯಾನ್’
ಹತ್ತು ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಸೋಲಿಸಲು ಪಕ್ಷ ದ ಮುಖಂಡರಿಗೆ ಎಚ್ಡಿಕೆ-ಡಿಕೆಶಿ ಸೂಚನೆ
Team Udayavani, Dec 3, 2019, 4:24 AM IST
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವಡಿ.ಕೆ.ಶಿವಕುಮಾರ್ ಒಂದು ತಾಸು ಮಾತುಕತೆ ನಡೆಸಿದರು.
ಬೆಂಗಳೂರು: ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸುವ ವಿಚಾರದಲ್ಲಿ “ಮಾಸ್ಟರ್ ಪ್ಲ್ರಾನ್’ ರೂಪಿಸಿ ರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು, ಒಕ್ಕಲಿಗ ಸಮುದಾಯದ ಮತಗಳು ನಿರ್ಣಾಯಕವಾಗುವ ಕ್ಷೇತ್ರಗಳಲ್ಲಿ ಸಂದೇಶ ರವಾನೆಗೆ ಮುಂದಾಗಿದ್ದಾರೆ.
ಮತದಾನಕ್ಕೆ 3 ದಿನ ಬಾಕಿ ಇರುವಂತೆ ಹದಿನೈದು ಕ್ಷೇತ್ರಗಳಲ್ಲಿನ ಸ್ಥಿತಿಗತಿ ಬಗ್ಗೆ ಚರ್ಚಿಸಿರುವ ಇಬ್ಬರೂ
ನಾಯಕರು, ಅಂತಿಮ ಕಾರ್ಯತಂತ್ರದ ಭಾಗವಾಗಿ ಹತ್ತು ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು -ಮುಖಂಡರು ಕೆಲಸ ಮಾಡುವಂತೆ ಪ್ರಮುಖರಿಗೆ ನಿರ್ದೇಶನ ನೀಡಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ. ಅದೇ ರೀತಿ, ಕೆ.ಆರ್.ಪೇಟೆ, ಹುಣಸೂರು, ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಮಹಾಲಕ್ಷ್ಮಿಲೇ ಔಟ್, ಯಶವಂತಪುರ ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯಕ್ಕೆ ಗುಪ್ತ ಸಂದೇಶ ರವಾನೆಗೂ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ಗೆ ಸಿಕ್ಕಿದ ಬೆಂಬಲದ ಭರವಸೆ: ಪ್ರಾರಂಭದಲ್ಲಿ ಕಾಂಗ್ರೆಸ್, ಶಿವಾಜಿನಗರ ಹಾಗೂ ಕೆ.ಆರ್.ಪುರ, ಮಹಾಲಕ್ಷ್ಮಿಲೇ ಔಟ್, ಯಶವಂತಪುರ ಕ್ಷೇತ್ರಗಳು ಕೈ ಬಿಟ್ಟಂತೆಯೇ ಎಂದುಕೊಂಡಿತ್ತು. ಆದರೆ, ನಾಯಕರ ಪ್ರಚಾರ ಹಾಗೂ ಸ್ಥಳೀಯವಾಗಿ ಕೆಲವು ಕಡೆ ಅನರ್ಹ ಶಾಸಕರ ವಿರುದಟಛಿ ವ್ಯಕ್ತವಾಗುತ್ತಿರುವ ಆಕ್ರೋಶದ ನಂತರ ಇದೀಗ ಜೆಡಿಎಸ್ನ ಅಭ್ಯರ್ಥಿಗಳು ವೀಕ್ ಇರುವ ಕಡೆ ಕಾಂಗ್ರೆಸ್ಗೆ ಬೆಂಬಲದ ಭರವಸೆ ಸಿಕ್ಕಿದೆ ಎನ್ನಲಾಗಿದೆ.
ಶಿವಾಜಿನಗರ ಕ್ಷೇತ್ರದ ಬಗ್ಗೆ ಕಾಂಗ್ರೆಸ್ ನಾಯಕರು ಹೆಚ್ಚು ತಲೆ ಕೆಡಿಸಿಕೊಂಡಿದ್ದು ಮಲ್ಲಿಕಾರ್ಜುನ ಖರ್ಗೆ,
ಡಿ.ಕೆ.ಶಿವಕುಮಾರ್ ಪ್ರಚಾರದಲ್ಲಿ ತೊಡಗಿದ್ದಾರೆ. ಮುಸ್ಲಿಂ ಮತ ಕ್ರೋಢೀಕರಣಕ್ಕೆ ಜಮೀರ್ ಅಹಮದ್,
ನಸೀರ್ ಅಹಮದ್, ಎನ್.ಎ. ಹ್ಯಾರೀಸ್ಗೆ ಹೊಣೆಗಾರಿಕೆ ನೀಡಿದ್ದಾರೆ. ತಮಿಳು ಹಾಗೂ ಕ್ರಿಶ್ಚಿಯನ್ ಮತಗಳನ್ನು ಸೆಳೆಯಲು ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇಲ್ಲಿ ಜೆಡಿಎಸ್ ಅಭ್ಯರ್ಥಿ ಇದ್ದರೂ ಮುಸ್ಲಿಂ ಮತಗಳು ಕಾಂಗ್ರೆಸ್ಗೆ ವರ್ಗಾವಣೆಯಾಗುವ ಸಾಧ್ಯತೆಯೇ ಹೆಚ್ಚಾ ಗಿದೆ. ಈ ಮಧ್ಯೆ, ದೇವೇಗೌಡ ಹಾಗೂ ಕುಮಾರಸ್ವಾಮಿಯವರು, ಯಶವಂತಪುರ, ಮಹಾಲಕ್ಷ್ಮಿಲೇ ಔಟ್, ಚಿಕ್ಕಬಳ್ಳಾಪುರ, ಕೆ.ಆರ್.ಪೇಟೆ, ಹುಣಸೂರು ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಅಲ್ಲಿ ಅಭ್ಯರ್ಥಿಗಳು ಕೇಳಿದಾಗಲೆಲ್ಲಾ ಪ್ರಚಾರಕ್ಕೆ ಹೋಗಿ ಸಮುದಾಯದ ಮುಖಂಡರನ್ನು ಕರೆಸಿಕೊಂಡು ಮಾತನಾಡಿದ್ದಾರೆ. ಮಹಾಲಕ್ಷ್ಮಿ ಲೇ ಔಟ್ನಲ್ಲಿ ಲಿಂಗಾಯತ ಅಭ್ಯರ್ಥಿ ಗಿರೀಶ್ ಕೆ.ನಾಶಿ ಅವರಿಗೆ ಟಿಕೆಟ್ ನೀಡಿದ್ದೇವೆ. ಅವರಿಗೆ ಒಕ್ಕಲಿಗ ಸಮುದಾಯದ ಬೆಂಬಲ ನೀಡುವ ಮೂಲಕ ನಮ್ಮ ಕೈ ಬಲಪಡಿಸಬೇಕು ಎಂದು, ಯಶವಂತಪುರ ದಲ್ಲಿ ನಮ್ಮ ಪ್ರತಿಷ್ಠೆಯ ಪ್ರಶ್ನೆ ಎಂದು, ಹುಣಸೂರು,
ಕೆ.ಆರ್.ಪೇಟೆ, ಚಿಕ್ಕಬಳ್ಳಾಪುರದಲ್ಲಿ ಪಕ್ಷದ ಅಳಿವು-ಉಳಿವು ಎಂದು ಆಂತರಿಕವಾಗಿ ನಾಯಕರಿಗೆ ಹೇಳಿದ್ದಾರೆ ಎಂದು ಹೇಳಲಾಗಿದೆ.
ಕಾರ್ಯತಂತ್ರದ ಭಾಗ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿರುವುದು ಎರಡೂ ಪಕ್ಷದ
ಕಾರ್ಯಕರ್ತರು ಹಾಗೂ ಮುಖಂಡರುಗಳಿಗೆ ಸಂದೇಶ ಎಂದು ಹೇಳಲಾಗುತ್ತಿದೆ. ರಹಸ್ಯ ಚರ್ಚೆ
ನಡೆಸುವುದಕ್ಕಿಂತ ಬಹಿರಂಗವಾಗಿಯೇ ಭೇಟಿಯಾದರೆ ಕಾರ್ಯಕರ್ತರು ಹಾಗೂ ಮುಖಂಡರಲ್ಲಿನ
ಅನುಮಾನ, ಗೊಂದಲ ಪರಿಹಾರವಾಗುತ್ತದೆ. ಮತ್ತೆ ಮೈತ್ರಿಯಾಗಲೂಬಹುದು ಎಂಬ ಧೈರ್ಯ ಬರುತ್ತದೆ. ನಾವು ರವಾನಿಸುವ ಸಂದೇಶ ವರ್ಕ್ ಔಟ್ ಆಗುತ್ತದೆ ಎಂಬ ಕಾರ್ಯತಂತ್ರದಡಿಯೇ ಇಬ್ಬರೂ
ಭೇಟಿಯಾಗಿದ್ದಾರೆ ಎನ್ನಲಾಗಿದೆ.
● ಎಸ್. ಲಕ್ಷ್ಮಿನಾರಾಯಣ