ಸೈಕಲ್ ರವಿ ಜತೆ ಮಾಜಿ ಸಚಿವರ ನಂಟು ಮಾಹಿತಿ
Team Udayavani, Jul 18, 2018, 6:00 AM IST
ಬೆಂಗಳೂರು: ಕುಖ್ಯಾತ ರೌಡಿ ಶೀಟರ್ ಸೈಕಲ್ ರವಿ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲ್ ನಡುವೆ ದೂರವಾಣಿ ಕರೆಗಳ ವಿನಿಮಯ ಆಗಿದೆ ಎಂಬ ಸುದ್ದಿ ಮಂಗಳವಾರ ದಿನವಿಡೀ ಪೊಲೀಸ್ ಇಲಾಖೆಗೆ ತಲೆನೋವು ತಂದಿತ್ತು. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಸೈಕಲ್ ರವಿ ವಿಚಾರಣೆ ಸಂದರ್ಭದಲ್ಲಿ ಸಂಗ್ರಹಿಸಲಾಗಿದ್ದ ಕಾಲ್ ರೆಕಾರ್ಡ್ನಲ್ಲಿ ಎಂ.ಬಿ.ಪಾಟೀಲ್ ಅವರದು ಎಂದು ಹೇಳಲಾದ 7760977777 ಸಂಖ್ಯೆಗೆ ಸೈಕಲ್ ರವಿ ಬಳಸಿದ್ದ ಎನ್ನಲಾದ 9741199999 ಸಂಖ್ಯೆಯಿಂದ ಹಲವು ಬಾರಿ ಕರೆ ಮಾಡಲಾಗಿತ್ತು ಎಂಬುದು ಸಿಸಿಬಿ ಸಿಡಿಆರ್ನಲ್ಲಿ ಉಲ್ಲೇಖೀಸಿರುವುದು ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿತ್ತು.
ಆದರೆ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಈ ಕುರಿತು ಸುದ್ದಿ ಪ್ರಸಾರವಾಗುತ್ತಿದ್ದಂತೆ ಮಾಜಿ ಸಚಿವ ಎಂ.ಬಿ.ಪಾಟೀಲ್, ಮಾಧ್ಯಮಗಳಲ್ಲಿ ನನ್ನದು ಎಂದು ತೋರಿಸುತ್ತಿರುವ ಮೊಬೈಲ್ ಸಂಖ್ಯೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಸಚ್ಚಿದಾನಂದ ಅವರಿಗೆ ಸೇರಿದ್ದು. ಸೈಕಲ್ ರವಿ ಯಾರು ಎಂಬುದು ನನಗೆ ಗೊತ್ತಿಲ್ಲ. ಸಿಸಿಬಿ ಪೊಲೀಸರಿಂದ ಮಾಹಿತಿ ಪಡೆಯುತ್ತೇನೆಂದು ಹೇಳಿದ್ದಾರೆ. ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಈ ಕುರಿತು ಪ್ರತಿಕ್ರಿಯಿಸಿ, ಸೈಕಲ್ ರವಿ ಎಂ.ಬಿ.ಪಾಟೀಲ್ ಅವರ ಜತೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆಂಬ ಬಗ್ಗೆ ಮಾಹಿತಿ ಇಲ್ಲ. ಊಹಾಪೋಹ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡಲ್ಲ ಎಂದು ತಿಳಿಸಿದರು.
ಕಾಲ್ ಡೀಟೇಲ್ಸ್ ರೆಕಾರ್ಡ್ನಲ್ಲಿ ಏನಿದೆ?: ಸೈಕಲ್ ರವಿ ಜತೆಗೆ ಎಂ.ಬಿ. ಪಾಟೀಲರದು ಎಂದು ಹೇಳಲಾದ ಮೊಬೈಲ್ ಸಂಖ್ಯೆಯಿಂದ 80ಕ್ಕೂ ಹೆಚ್ಚು ಬಾರಿ ದೂರವಾಣಿ ಸಂಪರ್ಕದಲ್ಲಿ ದ್ದರು, ಸಂದೇಶ ಗಳನ್ನು ಕಳುಹಿಸಿದ್ದರು. ಹಾಗೆಯೇ ಸೈಕಲ್ ರವಿ ಬಳಸಿದ್ದ ಫೋನ್ನಿಂದಲೂ ಎಂ.ಬಿ. ಪಾಟೀಲರದು ಎಂದು ಹೇಳಲಾದ ಮೊಬೈಲ್ ಸಂಖ್ಯೆಗೆ 24 ಬಾರಿ ಕರೆ ಮಾಡಲಾಗಿತ್ತು ಎಂದು ಹೇಳಲಾಗಿದೆ. ಸಿಸಿಬಿ ಮೂಲಗಳ ಪ್ರಕಾರ ಸೈಕಲ್ ರವಿ ಬಂಧನ ವೇಳೆ ಈತನಿಂದ ಸುಮಾರು ಹತ್ತಕ್ಕೂ ಅಧಿಕ ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಎಲ್ಲ ಮೊಬೈಲ್ಗಳಲ್ಲಿ ಯಾವೆಲ್ಲ ಸಿಮ್ಕಾರ್ಡ್ಗಳು ಬಳಕೆ ಆಗಿವೆ ಎಂಬ ಮಾಹಿತಿ ಸಂಗ್ರಹಿಸಲಾಗಿತ್ತು. ಈ ವೇಳೆ ಸಿಕ್ಕ ಸಿಡಿಆರ್ನಲ್ಲಿ 7760977777 ಸಂಖ್ಯೆ ಎಂ.ಬಿ.ಪಾಟೀಲ್ರ ಸದಾಶಿವನಗರದ ನಿವಾಸದ ವಿಳಾಸದಲ್ಲಿದೆ. ಈ ಹಿನ್ನೆಲೆಯಲ್ಲಿ ಈ ನಂಬರ್ ಸಿಡಿಆರ್ ಪರಿಶೀಲಿಸಿದಾಗ ಸುಮಾರು 80ಕ್ಕೂ ಹೆಚ್ಚು ಬಾರಿ ಆ ಸಂಖ್ಯೆಯಿಂದ ಸೈಕಲ್ ರವಿಯನ್ನು ಸಂಪರ್ಕಿಸಿರುವ ಬಗ್ಗೆ ಮಾಹಿತಿ ದೊರಕಿದೆ ಎಂದು ಮೂಲಗಳು ತಿಳಿಸಿವೆ.
ಸೈಕಲ್ ರವಿಗೂ ನನಗೂ ಯಾವುದೇ ಸಂಬಂಧ ಇಲ್ಲ
ವಿಜಯಪುರ: ಸಮಾಜ ಬಾಹಿರ ಕೃತ್ಯದ ಆರೋಪ ಎದುರಿಸುತ್ತಿರುವ ರೌಡಿ ಶೀಟರ್ ಸೈಕಲ್ ರವಿ ಜತೆ ನನಗೆ ಯಾವುದೇ ಸಂಬಂಧವಿಲ್ಲ. ಹೀಗಿದ್ದರೂ ಕೆಲವು ಮಾಧ್ಯಮಗಳು ರೌಡಿಶೀಟರ್ ಜತೆ ಸಂಬಂಧವಿದೆ ಎಂದು ನನ್ನ ಚಾರಿತ್ರವಧೆ ಮಾಡುವ ವರದಿ ಪ್ರಕಟಿಸಿವೆ. ಅಂಥ
ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಮಾಜಿ ಸಚಿವ ಹಾಗೂ ಶಾಸಕ ಡಾ.ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯುನ್ಮಾನ ಹಾಗೂ ಕೆಲವು ಅಂತರ್ಜಾಲ ಮಾಧ್ಯಮಗಳು ನನ್ನ ತೇಜೋವಧೆ ಮಾಡುವ ವರದಿ ಪ್ರಕಟಿಸಿವೆ. ಈ ಕುರಿತು ವರದಿ ಪ್ರಸಾರ ಮಾಡಿದ ಮಾಧ್ಯಮಗಳ ವಿರುದಟಛಿ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದು ಇದಕ್ಕಾಗಿ ಕಾನೂನು ಸಲಹೆಗಾರರೊಂದಿಗೆ ಸಮಾಲೋಚನೆ ನಡೆಸಿದ್ದೇನೆ ಎಂದರು. ರವಿ ಜತೆ ಸಂಭಾಷಣೆ ಮಾಡಿದ್ದಾಗಿ ಮೊಬೈಲ್ ನಂಬರ್ ಸಿಸಿಬಿ ಮೂಲಗಳಿಂದ ಪಡೆದುದಾಗಿ ಪ್ರಸಾರ ಮಾಡಿವೆ. ಆದರೆ ಆ ಮೊಬೈಲ್ ನಂಬರ್ ಮಂಡ್ಯದ ಕಾಂಗ್ರೆಸ್ ಯುವ ಮುಖಂಡ ಸಚ್ಚಿದಾನಂದಗೆ ಸೇರಿದ್ದಾಗಿದೆ. ಆದರೆ ಈ ನಂಬರ್ ರೌಡಿಶೀಟರ್ ಸೈಕಲ್ ರವಿಗೆ ಸೇರಿದ್ದು ಎಂದು ಪ್ರಸಾರ ಮಾಡುವ ಮೂಲಕ ನನ್ನ ರಾಜಕೀಯ ವರ್ಚಸ್ಸಿಗೆ ಧಕ್ಕೆ ತರುವ ಕೃತ್ಯ ಎಸಗಿವೆ ಎಂದು ಹೇಳಿದರು.