ಹಾಲು ಶೇಖರಣೆ ಸಾಮರ್ಥ್ಯ ಏರಿಸಲು ಸಚಿವರ ಸೂಚನೆ
Team Udayavani, Sep 14, 2019, 3:00 AM IST
ಬೆಂಗಳೂರು: “ರಾಜ್ಯದಲ್ಲಿ ಹಾಲು ಉತ್ಪಾದನೆ ಹೆಚ್ಚಿಸಲು ಹಾಲು ಶೇಖರಣೆ ಸಾಮರ್ಥ್ಯವನ್ನು 77 ಲಕ್ಷ ಲೀಟರ್ನಿಂದ ಒಂದು ಕೋಟಿ ಲೀಟರ್ಗೆ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸ ಲಾಗಿದೆ’ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದರು.
ಸಚಿವರಾದ ಬಳಿಕ ಶುಕ್ರವಾರ ವಿಕಾಸ ಸೌಧದಲ್ಲಿ ಮೊದಲ ಬಾರಿಗೆ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಇತ್ತೀಚೆಗೆ ದೇಸಿ ಹಸುವಿನ ಹಾಲಿಗೆ ಬೇಡಿಕೆ ಹೆಚ್ಚುತ್ತಿದೆ. ಕರ್ನಾಟಕ ಹಾಲು ಮಹಾಮಂಡಳವು ಬೆಂಗಳೂರು ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ದೇಸಿ ಹಸುವಿನ ಹಾಲು ಶೇಖರಣೆ ಪ್ರಾರಂಭಿಸಿದ್ದು, ನಿತ್ಯ 2000 ಲೀಟರ್ ಶೇಖರಣೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಶೇಖರಣಾ ಸಾಮರ್ಥ್ಯವನ್ನು 10,000 ಲೀಟರ್ಗೆ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರದ ಬದಲಿಗೆ ಕೆಟಿಪಿಪಿ ಕಾಯ್ದೆಯಡಿ ಟೆಂಡರ್ ಕರೆದು ಅರ್ಹ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಬೇಕು. ಬೈಪಾಸ್ ಪ್ರೋಟಿನ್ ಪಶು ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಸಲು ಅನುಕೂಲವಾಗುವಂತೆ ಪಶು ಆಹಾರ ಘಟಕಗಳ ಸಾಮರ್ಥ್ಯ ಹೆಚ್ಚಿಸಲು ಹಾಗೂ ಆಯಾ ಪ್ರದೇಶದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಹೊಸ ಘಟಕ ಆರಂಭಿಸಲು ಯೋಜನೆ ರೂಪಿಸಬೇಕು ಎಂದು ತಿಳಿಸಿದರು.
ದೆಹಲಿಯ ಮದರ್ ಡೇರಿಯು ನಿತ್ಯ ಐದು ಲಕ್ಷ ಲೀಟರ್ ಹಸುವಿನ ಹಾಲನ್ನು ಕೆಎಂಎಫ್ನಿಂದ ಖರೀದಿಸುತ್ತಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ಇದಕ್ಕೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ವಿವರಿಸಿದರು.