ಕಂದಾಯ ಸಚಿವ ಆರ್. ಅಶೋಕ್ ಗೆ ಕೋವಿಡ್ ಪಾಸಿಟಿವ್; ಆಸ್ಪತ್ರೆಗೆ ದಾಖಲು
Team Udayavani, Jan 7, 2022, 2:03 PM IST
ಬೆಂಗಳೂರು: ರಾಜ್ಯದ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಕೋವಿಡ್ 19 ಸೋಂಕು ದೃಢವಾಗಿದೆ. ಶೀತ, ಜ್ವರದಿಂದ ಬಳಲುತ್ತಿರುವ ಅವರನ್ನು ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದಲ್ಲಿ ಕೋವಿಡ್ ಭೀತಿ ಹೆಚ್ಚುತ್ತಿರುವ ಕಾರಣ ಶುಕ್ರವಾರ ರಾತ್ರಿಯಿಂದ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ನೈಟ್ ಕರ್ಫ್ಯೂ ಕೂಡಾ ಜಾರಿಯಲ್ಲಿದೆ.
ಒಮಿಕ್ರಾನ್ ಭೀತಿ: ರಾಜ್ಯದಲ್ಲಿ ಕೋವಿಡ್ 19 ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವಂತೆ ಕೋವಿಡ್ ರೂಪಾಂತರಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ.
ಇದನ್ನೂ ಓದಿ:‘ಸಂಪೂರ್ಣ ಲಾಕ್ ಡೌನ್’ ಕಳೆದು ಹೋಗಿರುವ ನೀತಿ: ಡಾ.ಸುಧಾಕರ್ ಸ್ಪಷ್ಟನೆ
ಜ.6ರಂದು (ಗುರುವಾರ) ಒಂದೇ ದಿನ ರಾಜ್ಯದಲ್ಲಿ 107 ಒಮಿಕ್ರಾನ್ ಪ್ರಕರಣಗಳು ದೃಢವಾಗಿದೆ. ಇದರೊಂದಿಗೆ ರಾಜ್ಯದ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 333ಕ್ಕೆ ಏರಿಕೆಯಾಗಿದೆ ಎಂದು ರಾಜ್ಯದ ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.
ಹೆಚ್ಚಿದ ಕೋವಿಡ್: ರಾಜ್ಯದಲ್ಲಿ ಗುರುವಾರ 5,031 ಮಂದಿಗೆ ಸೋಂಕು ದೃಢಪಟ್ಟಿದ್ದು, ಪಾಸಿಟಿವಿಟಿ ದರ ಶೇ.3.95ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 22,173ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ಬರೋಬ್ಬರಿ 4,324 ಪ್ರಕರಣಗಳು ಪತ್ತೆಯಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 18,913ಕ್ಕೆ ಏರಿಕೆಯಾಗಿದೆ. ಅಷ್ಟೇ ಅಲ್ಲ, ಬೆಂಗಳೂರು ನಗರ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.7.5ಕ್ಕೆ ಏರಿಕೆಯಾಗಿದೆ.