ಮರಳಿಗಾಗಿ ರಸ್ತೆ ತಡೆ ನಡೆಸಿದ ಶಾಸಕ ರೇಣುಕಾಚಾರ್ಯ ವಶಕ್ಕೆ
Team Udayavani, Dec 4, 2018, 6:00 AM IST
ಮಲೇಬೆನ್ನೂರು: ಸಮರ್ಪಕ ಮರಳು ಪೂರೈಕೆ ಹಾಗೂ ವಿವಿಧ ಬೇಡಿಕೆ ಈಡೇರಿಕೆಗಾಗಿ ರಸ್ತೆ ತಡೆ ನಡೆಸುತ್ತಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಮಲೆಬೆನ್ನೂರಿಗೆ ಕರೆದೊಯ್ದು, ಬಿಡುಗಡೆಗೊಳಿಸಿದ್ದಾರೆ. ಆದರೆ, ಮಲೆಬೆನ್ನೂರಿನಲ್ಲೇ ಶಾಸಕ ರೇಣುಕಾಚಾರ್ಯ ರಾತ್ರಿಯೂ ಸಹ ಪ್ರತಿಭಟನೆ ಮುಂದುವರಿಸಿದ್ದಾರೆ.
ಹೊನ್ನಾಳಿಯಲ್ಲಿ ಸೋಮವಾರ ರಸ್ತೆ ತಡೆ ನಡೆಸುತ್ತಿದ್ದ ರೇಣುಕಾಚಾರ್ಯ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದ ಪೊಲೀಸರು, ಮಲೇಬೆನ್ನೂರು ನೀರಾವರಿ ನಿಗಮದ ಕಚೇರಿ ಆವರಣದಲ್ಲಿ ಬಿಡುಗಡೆ ಮಾಡಲು ಮುಂದಾದರು. ಆದರೆ, ಜಿಲ್ಲಾಡಳಿತದ ಈ ಕ್ರಮವನ್ನು ರೇಣುಕಾಚಾರ್ಯ ಖಂಡಿಸಿ ಸ್ಥಳದಲ್ಲಿಯೇ ಪ್ರತಿಭಟನೆ ಮುಂದುವರಿಸಿದ್ದಾರೆ. ಮರಳು ಸಮಸ್ಯೆ ಹಾಗೂ ಇತರ ಬೇಡಿಕೆಗಳ ಈಡೇರಿಕೆಗಾಗಿ ನ.19 ರಂದು ತುಂಗಭದ್ರಾ ನದಿಗಿಳಿದು ಮರಳು ತುಂಬಿದ್ದ ರೇಣುಕಾ
ಚಾರ್ಯ ನಂತರ ನ.27ರಂದು ಉಪವಾಸ ಸತ್ಯಾಗ್ರಹ ಕೈಗೊಂಡು ಅಸ್ವಸ್ಥರಾಗಿದ್ದರು. ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಸಿದ್ದೇಶ್ವರ್ ಅವರ ಮನವೊಲಿಕೆಯಿಂದ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದರು.
ನಂತರ ಸೋಮವಾರ ಹೊನ್ನಾಳಿ ಬಂದ್ಗೆ ಕರೆ ನೀಡಿದ್ದ ಶಾಸಕರು, ಹೊನ್ನಾಳಿ ಟಿಬಿ ವೃತ್ತದಲ್ಲಿ ರಸ್ತೆ ತಡೆ ನಡೆಸುವಾಗ ಪೊಲೀಸರು ವಶಕ್ಕೆ ಪಡೆದು ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದರು.