ಪೂತ್ತೂರಿನ ಕೃಷಿಕ ಜೊತೆ ಮೋದಿ ಸಂವಾದ
Team Udayavani, Feb 24, 2019, 11:40 PM IST
ಪುತ್ತೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಕಿಸಾನ್ ಸಮ್ಮಾನ್ ಯೋಜನೆಯ ಉದ್ಘಾಟನೆ ಸಮಾರಂಭದಲ್ಲಿ ದೇಶಾದ್ಯಂತ ವೆಬ್ಕಾಸ್ಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಪುತ್ತೂರಿನ ಪ್ರಗತಿಪರ ಕೃಷಿಕ ಸೇಡಿಯಾಪು ಜನಾರ್ದನ ಭಟ್ ಅವರು ಪ್ರಧಾನಿ ನರೇಂದ್ರ ಮೋದಿ ಜತೆ ಸಂವಾದ ನಡೆಸುವ ಅವಕಾಶ ಪಡೆದರು.
ಉತ್ತರಪ್ರದೇಶದ ಗೋರಖ್ ಪುರದಲ್ಲಿ ನಡೆದ ಕಾರ್ಯಕ್ರಮದ ನೇರ ಪ್ರಸಾರ ದೇಶಾದ್ಯಂತ ನಡೆಯಿತು. ಇದರ ಜತೆಗೆ ಸಂವಾದವನ್ನೂ ಏರ್ಪಡಿಸಿದ್ದು, ರಾಜ್ಯದ ಇಬ್ಬರು ರೈತರಿಗೆ ಮಾತ್ರ ಸಂವಾದದಲ್ಲಿ ಮಾತನಾಡುವ ಅವಕಾಶ ಲಭಿಸಿದೆ. ಒಬ್ಬರು ಜನಾರ್ದನ ಭಟ್ಟರಾದರೆ ಇನ್ನೊಬ್ಬರು ತುಮಕೂರಿನ ರೈತ. ಪುತ್ತೂರಿನ ಮೊಟ್ಟೆತ್ತಡ್ಕ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಜಿಲ್ಲಾ ಮಟ್ಟದ ಸಂವಾದ ಹಾಗೂ ವೆಬ್ಕಾಸ್ಟ್ ಏರ್ಪಡಿಸಲಾಗಿತ್ತು. “ನಾನೊಬ್ಬ ಗೇರುಬೀಜ, ಬಾಳೆ, ಪೆಪ್ಪರ್, ಅಡಿಕೆ ಬೆಳೆಸುವ ಸಣ್ಣ ರೈತ. ನನ್ನ ಜಮೀನಿನ ಸುತ್ತಮುತ್ತಲಿರುವವರೂ ಸಣ್ಣ ರೈತರೇ ಆಗಿದ್ದಾರೆ.
ಪ್ರಧಾನ ಮಂತ್ರಿಗಳೇ ನೀವು ಜಾರಿಗೆ ತಂದಿರುವ ಹಲವು ಯೋಜನೆಗಳು ರೈತರಿಗೆ ಉಪಕಾರಿ ಆಗಿವೆ. ಅದರಲ್ಲೂ ಪ್ರಮುಖವಾಗಿ ನೀಮ್ ಕೋಟಿಂಗ್ ಇರುವ ಯೂರಿಯಾ ರಸಗೊಬ್ಬರ ಹಾಗೂ ಫಸಲ್ ಭೀಮಾ ಯೋಜನೆ ತುಂಬಾ ಉಪಯುಕ್ತ. ಇನ್ನಷ್ಟು ಉಪಕಾರಿ ಯೋಜನೆಗಳನ್ನು ರೈತರಿಗೆ ನೀಡುವಂತಾಗಲಿ’ ಎಂದು ಸಂವಾದದಲ್ಲಿ ಜನಾರ್ದನ ಭಟ್ಟರು ಹಾರೈಸಿದರು.
ಮನ್ಕಿ ಬಾತ್ನಲ್ಲಿ ಉಲ್ಲೇಖ: ಇದೇ ವೇಳೆ ಭಾನುವಾರ ತಮ್ಮ ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿ ಉಡುಪಿಯ ಓಂಕಾರ್ ಶೆಟ್ಟಿಯವರನ್ನು ಉಲ್ಲೇಖ ಮಾಡಿದ್ದಾರೆ. ದೇಶಕ್ಕಾಗಿ ಪ್ರಾಣವನ್ನರ್ಪಿಸಿದ ಯೋಧರಿಗಾಗಿ ಇದುವರೆಗೆ ರಾಷ್ಟ್ರೀಯ ಯುದ್ಧ ಸ್ಮಾರಕ ಇರಲಿಲ್ಲ. ಈಗ ಅತ್ಯಂತ ಕಡಿಮೆ ಅವಧಿಯಲ್ಲಿ ಅದು ನಿರ್ಮಾಣವಾಗಿದ್ದು, ಫೆ.25ರಂದು ದಿಲ್ಲಿಯಲ್ಲಿ ಸೇನೆ, ದೇಶಕ್ಕೆ ಸಮರ್ಪಣೆಯಾಗಲಿದೆ ಎಂದು ಹೇಳಿದ ಪ್ರಧಾನಿ, “ನರೇಂದ್ರ ಮೋದಿ ಆ್ಯಪ್ನಲ್ಲಿ ನ್ಯಾಶನಲ್ ವಾರ್ ಮೆಮೋರಿಯಲ್ ನಿರ್ಮಾಣದ ಬಗ್ಗೆ ಕರ್ನಾಟಕ,ಉಡುಪಿಯ ಶ್ರೀ ಓಂಕಾರ್ ಶೆಟ್ಟಿ ಜೀಯವರು ಸಂತಸ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದ್ದಾರೆ.