ರಾಜ್ಯಕ್ಕೆ ಮೋದಿ ಆಗಮನ : ಬಿಜೆಪಿಗೆ ಚುನಾವಣಾ ಚುರುಕು
Team Udayavani, Jun 20, 2022, 8:45 AM IST
ಬೆಂಗಳೂರು: ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಅನಾವರಣಕ್ಕಾಗಿ ಪ್ರಧಾನಿ ಮೋದಿ ರಾಜ್ಯದಲ್ಲಿ ಎರಡು ದಿನಗಳ ಪ್ರವಾಸ ಇಂದಿನಿಂದ ಆರಂಭವಾಗುತ್ತಿದ್ದು, ರಾಜ್ಯ ಬಿಜೆಪಿಯಲ್ಲಿ ಚುರುಕು ಕಾಣಿಸಿಕೊಂಡಿದೆ.
ಆಡಳಿತಾತ್ಮಕ ವಿಚಾರಗಳಲ್ಲಿ ಕುಂಟುತ್ತಾ ಸಾಗುತ್ತಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಮೋದಿ ರಾಜ್ಯ ಭೇಟಿ ಹಿನ್ನೆಲೆಯಲ್ಲಿ ಮೈ ಕೊಡವಿ ಎದ್ದು ನಿಂತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಂತೂ ಭಾನುವಾರ ಮಧ್ಯರಾತ್ರಿ ಕೊಮ್ಮಘಟ್ಟಕ್ಕೆ ತೆರಳಿ ಪ್ರಧಾನಿ ಮೋದಿ ಭಾಗವಹಿಸುವ ಕಾರ್ಯಕ್ರಮ ಸ್ಥಳದ ಪರಿಶೀಲನೆ ನಡೆಸಿದ್ದಾರೆ.
ಎರಡು ದಿನದ ಭೇಟಿಯಿಂದ ಬಿಬಿಎಂಪಿ, ಮಂಡ್ಯ, ಮೈಸೂರು ಭಾಗದಲ್ಲಿ ಒಂದಿಷ್ಟು ಅಭಿವೃದ್ಧಿ ಕಾಮಗಾರಿಗಳು ಕಾಣಿಸಿಕೊಂಡಿದ್ದು, ರಸ್ತೆ ಗುಂಡಿಗಳಿಗೆ ಕೊಂಚ ಮುಕ್ತಿ ಸಿಕ್ಕಿದೆ. ಪ್ರಧಾನಿ ಮೋದಿ ಪ್ರತಿ ತಿಂಗಳು ಬೆಂಗಳೂರಿನಲ್ಲಿ ಎರಡು ದಿನ ನಗರ ಪ್ರದಕ್ಷಿಣೆ ಮಾಡಲಿ ಎಂದು ನೆಟ್ಟಿಗರು ಬಿಜೆಪಿ ಸರಕಾರವನ್ನು ಟೀಕಿಸಿದ್ದಾರೆ.
ಇದನ್ನೂ ಓದಿ:ಯೋಜನೆಗಳಿಗೆ ರಾಜಕೀಯ ಬಣ್ಣ ದುರದೃಷ್ಟ: ಪ್ರಧಾನಿ ಮೋದಿ ವಿಷಾದ
ಸುಮಾರು 15,767 ಕೋಟಿ ರೂ. ವೆಚ್ಚದ ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆಗೆ ಮೋದಿ ಚಾಲನೆ ನೀಡಲಿದ್ದು, ಬೆಂಗಳೂರು, ರಾಮನಗರ, ಕೋಲಾರ ಭಾಗದ ಜನರ ಬಹುದಿನಗಳ ಕನಸು ಒಂದು ಹಂತಕ್ಕೆ ಬಂದಂತಾಗಿದೆ. 7231 ಕೋಟಿ ರೂ. ಮೌಲ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗೂ ಈ ಸಂದರ್ಭದಲ್ಲಿ ಚಾಲನೆ ಸಿಗಲಿದೆ.
ಚುರುಕು: ಎರಡು ದಿನಗಳ ಭೇಟಿ ಸಂದರ್ಭದಲ್ಲಿ ಒಟ್ಟು 33 ಸಾವಿರ ಕೋಟಿ ರೂ. ಮೌಲ್ಯದ 19 ಯೋಜನೆಗಳಿಗೆ ಈ ಸಂದರ್ಭದಲ್ಲಿ ಮೋದಿ ಚಾಲನೆ ನೀಡಲಿದ್ದಾರೆ. ಇದು ಚುನಾವಣಾ ವರ್ಷದಲ್ಲಿ ಬಿಜೆಪಿಗೆ ಒಂದಿಷ್ಟು ಚುರುಕು ನೀಡಿದೆ. ಯಾವುದೇ ರಾಜ್ಯದ ಚುನಾವಣಾ ವರ್ಷದಲ್ಲಿ ಮೇಲಿಂದ ಮೇಲೆ ಆಗಮಿಸಿ ಅಭಿವೃದ್ಧಿ ಯೋಜನೆಗಳ ಹೊಳೆ ಹರಿಸುವುದು ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮೋದಿಯವರ ಕಾರ್ಯಶೈಲಿಯಾಗಿದೆ.