ಸಿದ್ದಗಂಗಾ ಶ್ರೀಗಳಿಗೆ ಹೆಚ್ಚಿನ ಚಿಕಿತ್ಸೆ; ವೈದ್ಯರ ತಂಡ ಚೆನ್ನೈಗೆ
Team Udayavani, Dec 6, 2018, 11:16 AM IST
ತುಮಕೂರು: ಜ್ವರದಿಂದ ಬಳಲಿ ಎಲ್ಲರ ಆತಂಕಕ್ಕೆ ಕಾರಣವಾಗಿದ್ದ ಶತಾಯುಷಿ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಗುರುವಾರ ಚೇತರಿಸಿಕೊಂಡಿದ್ದು ಎಂದಿನಂತೆ ನಿತ್ಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ್ದಾರೆ.
ಸ್ವಲ್ಪ ತಡವಾಗಿ ಎದ್ದ ಶ್ರೀಗಳು ಸ್ನಾನ ಮುಗಿಸಿ ಪೂಜಾ ವಿಧಿಗಳನ್ನು ನೆರವೇರಿಸಿ ವಿಶ್ರಾಂತಿ ಪಡೆಯುತ್ತಿದ್ದಾರೆ .
ಆಸ್ಪತ್ರೆಗೆ ಡಿಸಿಎಂ
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಶ್ರೀಗಳು ಈಗ ಸಂಪೂರ್ಣ ವಾಗಿ ಚೇತರಿಸಿಕೊಂಡಿದ್ದು , ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ಪರಮೇಶ್ವರ್ ಅವರು ತಿಳಿಸಿದರು.
ತುಮಕೂರು ನಗರ ಕ್ಷೇತ್ರದ ಶಾಸಕ ಜ್ಯೋತಿ ಗಣೇಶ್ ಅವರು ಮಠಕ್ಕೆ ತೆರಳಿ ಶ್ರೀಗಳ ಆರೋಗ್ಯ ವಿಚಾರಿಸಿದರು.
ಇಂದು ಶ್ರೀಗಳ ಭೇಟಿಗೆ ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿದ್ದು ಸಾಮಾನ್ಯ ಭಕ್ತರಿಗೆ ಅವಕಾಶ ನೀಡಿರಲಿಲ್ಲ.
ಚೆನ್ನೈಗೆ ವೈದ್ಯರ ತಂಡ
ಈಗಾಗಲೇ ಶ್ರೀಗಳಿಗೆ 11 ಸ್ಟೆಂಟ್ಗಳನ್ನು ಅಳವಡಿಸಲಾಗಿದ್ದು ಕೆಲ ಸ್ಟಂಟ್ಗಳನ್ನು ತೆಗೆದು ಹೊಸ ಸ್ಟೆಂಟ್ ಗಳನ್ನು ಅಳವಡಿಸುವ ಬಗ್ಗೆ ಬಿಜಿಎಸ್ ಆಸ್ಪತ್ರೆಯ ವೈದ್ಯರ ತಂಡ ಸಿದ್ಧತೆ ನಡೆಸಿದೆ.
ಶ್ರೀಗಳ ಸ್ಟೆಂಟ್ ವರದಿ, ರಕ್ತದ ಮಾದರಿ, ಸ್ಕ್ಯಾನಿಂಗ್ ವರದಿ ಸಹಿತ ಮೂವರು ವೈದ್ಯರು ಚೆನ್ನೈಗೆ ತೆರಳಿ ನುರಿತ ವೈದ್ಯರ ಸಲಹೆ ಪಡೆಯಲು ತೆರಳಿದ್ದಾರೆ.ಸ್ಟೆಂಟ್ ತಜ್ಞರಾದ ಡಾ.ಮೊಹಮ್ಮದ್ ಮತ್ತು ಡಾ.ಪಳನಿವೇಲು ಅವರ ಸಲಹೆ ಪಡೆಯಲು ವೈದ್ಯರು ತೆರಳಿದ್ದಾರೆ.
ಶ್ರೀಗಳನ್ನು ಬಿಜಿಎಸ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಮುಂದುವರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.