ಎಂಟಿಬಿ ಗೆಲ್ಲಿಸಿದರೆ ಹೆಚ್ಚಿನ ಅನುದಾನ
Team Udayavani, Nov 19, 2019, 3:05 AM IST
ಬೆಂಗಳೂರು/ಹೊಸಕೋಟೆ: ನಾಮಪತ್ರ ಸಲ್ಲಿಕೆ ಅವಧಿ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉಪಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಮೊದಲಿಗೆ ಹೊಸಕೋಟೆ ಕ್ಷೇತ್ರದಲ್ಲೇ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಪಕ್ಷದ ಅಭ್ಯರ್ಥಿ ಯನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.
ಹೊಸಕೋಟೆಯ ಹಳೇ ಬಸ್ನಿಲ್ದಾಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಎಂಟಿಬಿ ನಾಗರಾಜ್ ರಾಜ್ಯದ ಶಾಸಕರಲ್ಲಿಯೇ ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಬಿಜೆಪಿಯಂತೆ ಅಭಿವೃದ್ಧಿ ಪರವಾಗಿರುವ ಇವರ ಹಿತ ಕಾಪಾಡಲು ಬಿಜೆಪಿ ಬದ್ಧವಾಗಿದೆ. ಈಗಾಗಲೇ ಕ್ಷೇತ್ರಕ್ಕೆ 30 ಕೆರೆಗಳಿಗೆ ನೀರು ತುಂಬಿಸಲು 100 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಚುನಾವಣೆ ನಂತರ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಶರತ್ ಬಚ್ಚೇಗೌಡ ಉಚ್ಚಾಟನೆ: ಉಪಚುನಾವಣೆ ಯಲ್ಲಿ ಪಕ್ಷದ ಆದೇಶವನ್ನು ಧಿಕ್ಕರಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶರತ್ ಬಚ್ಚೇಗೌಡರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ತಮ್ಮ ಅಧಿಕಾರಾವಧಿಯಲ್ಲಿ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ವಿಫಲವಾಗಿರುವ ಬಚ್ಚೇಗೌಡರು, ಸಮ್ಮತಿ ಸೂಚಿಸಿದ ನಂತರವಷ್ಟೇ ಎಂಟಿಬಿ ನಾಗರಾಜ್ರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇದೀಗ ಆಣೆ, ಪ್ರಮಾಣಗಳನ್ನು ಮಾಡುವ ಮೂಲಕ ಗೊಂದಲ ನಿರ್ಮಿಸುತ್ತಿದ್ದಾರೆ. ಇಂಥ ದ್ರೋಹಿಗಳನ್ನು ಯಾವುದೇ ಕಾರಣಕ್ಕೂ ಮತ್ತೂಮ್ಮೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಯಡಿಯೂರಪ್ಪ ಗುಡುಗಿದರು.