ಅಖಂಡ ಕರ್ನಾಟಕದ ಅಭಿವೃದ್ಧಿ ನನ್ನ ಗುರಿ : ಸಿಎಂ ಸ್ವಾತಂತ್ರ್ಯ ಭಾಷಣ
Team Udayavani, Aug 15, 2018, 10:55 AM IST
ಬೆಂಗಳೂರು : ರಾಜ್ಯಾದ್ಯಂತ 72 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೆರಿಸಿ ಜನತೆಯನ್ನುದ್ದೇಶಿ ಮಾತನಾಡಿದರು.
ಭರತ ಭೂಮಿ ನನ್ನ ತಾಯಿ ನನ್ನ ಪೊರೆವ ತೊಟ್ಟಿಲು… ಎನ್ನುವ ಕುವೆಂಪು ಅವರ ಜನಪ್ರಿಯ ಸಾಲುಗಳ ಮೂಲಕ ಭಾಷಣ ಆರಂಭಿಸಿ ಜನತೆಗೆ ಶುಭಾಶಯಗಳನ್ನು ತಿಳಿಸಿದರು.
‘ಸಂಪೂರ್ಣ ಕರ್ನಾಟಕದ ಅಭಿವೃದ್ಧಿಯೇ ನನ್ನ ಗುರಿ’ ಎಂದ ಸಿಎಂ ಬೆಳಗಾವಿಗೆ ಇಲಾಖೆಯ ಕೆಲ ಕಚೇರಿಗಳನ್ನು ಸ್ಥಳಾಂತರಿಸುವುದಾಗಿ ತಿಳಿಸಿದರು.
ನಮ್ಮ ಸರ್ಕಾರ ರೈತರ ಏಳಿಗೆಗೆ ಬದ್ಧ. ರೈತರ 49,000 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದೆ. ಆಧುನಿಕರಣವನ್ನು ರೈತರು ತಿಳಿಯಲು ಪ್ರತಿ ತಿಂಗಳು ‘ರೈತ ಸ್ಪಂದನ’ ಕಾರ್ಯಕ್ರಮ ಆಯೋಜಿಸುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿಗಳು ಪ್ರತೀ ತಿಂಗಳೂ ತಾಲೂಕು ಮಟ್ಟದಲ್ಲಿ ಸಮೀಕ್ಷಾ ಸಭೆಗಳನ್ನು ನಡೆಸಿ ಹೊಬಳಿ ಮಟ್ಟದಲ್ಲಿ ವಾಸ್ತವ್ಯ ಹೂಡಬೇಕು ಎಂದು ತಿಳಿಸಿದರು.
ಬೆಂಗಳೂರಿನ ಟ್ರಾಫಿಕ್ ನಿಯಂತ್ರಣಕ್ಕೆ ‘ಏಕೀಕೃತ ಭೂ ಸಾರಿಗೆ ಪ್ರಾಧಿಕಾರ’ ರಚನೆ ಮಾಡುವುದಾಗಿ ತಿಳಿಸಿದರು.
ಮುಂದಿನ ವರ್ಷ ಮಹಾತ್ಮಾ ಗಾಂಧೀಜಿ ಅವರ 150 ನೇ ಜನ್ಮದಿನಾಚರಣೆ ಪ್ರಯುಕ್ತ ‘ಗಾಂಧಿ 150, ಒಂದು ರಂಗ ಪಯಣ’ ಶೀರ್ಷಿಕೆಯಲ್ಲಿ ರಾಜ್ಯಾದ್ಯಂತ 1000 ನಾಟಕಗಳ ಪ್ರದರ್ಶನ ನಡೆಸಲಾಗುತ್ತದೆ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದ ಶಿಕಾಗೊ ಸರ್ವ ಧರ್ಮ ಸಮ್ಮೇಳನದ ಭಾಷಣ ಮಾಡಿದ 125 ನೇ ವರ್ಷಾಚರಣೆಯನ್ನೂ ಆಚರಣೆ ಮಾಡುವುದಾಗಿ ತಿಳಿಸಿದರು.