ಸಿದ್ದರಾಮಯ್ಯ – ಡಿಕೆಶಿ ಜಗಳದಿಂದಲೇ ಬಿಜೆಪಿಗೆ 50ಕ್ಕೂ ಹೆಚ್ಚು ಸೀಟು ಬರಲಿದೆ : ಕಟೀಲ್
Team Udayavani, May 12, 2022, 5:14 PM IST
ಬೆಂಗಳೂರು : ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗಿದ್ದು ಕಾಂಗ್ರೆಸ್ ಪಕ್ಷದಲ್ಲಿರುವ ಆಂತರಿಕ ಜಗಳದಿಂದಲೇ ಬಿಜೆಪಿ ಪಕ್ಷಕ್ಕೆ 50 ಕ್ಕೂ ಹೆಚ್ಚಿನ ಸೀಟು ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ನಾವು ರಾಜ್ಯದಲ್ಲಿ 150+ ಸೀಟುಗಳಿಂದ ಗೆಲ್ಲಲಿದ್ದೇವೆ ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲಿ ಸೀಟಿಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನಡುವೆ ಜಿದ್ದಾಜಿದ್ದಿ ನಡೆಯುತ್ತಿದ್ದು ಇವರ ಜಗಳದಿಂದಲೇ ನಮಗೆ 50 ಸೀಟುಗಳು ಬರಲಿದೆ ಎಂದರು.
ಈಗಾಗಲೇ ಕುರ್ಚಿಗೆ ಗಲಾಟೆ ಶುರುವಾಗಿದೆ, ಪರಮೇಶ್ವರ್ ಅವರನ್ನ ಮುಗಿಸಿದ್ದು ಯಾರೂ ಅಲ್ಲ,ಕಾಂಗ್ರೆಸ್ ನವರೇ, ಸಿದ್ದರಾಮಯ್ಯ ಕಾಂಗ್ರೆಸ್ಗೆ ಹೋಗಿ, ಎಲ್ಲರನ್ನೂ ಮುಗಿಸಿದ್ದಾರೆ, ಈಗ ಡಿ.ಕೆ ಶಿವಕುಮಾರ್ ಅವರನ್ನೂ ಮುಗಿಸ್ತಾರೆ. ಈಗ ಅವರಲ್ಲಿ ಸಮಿತಿ ಮಾಡಿದ್ದಾರೆ, 150 ಕಾರ್ಯಾಧ್ಯಕ್ಷ, 150 ಉಪಾಧ್ಯಕ್ಷ, ಕಾರ್ಯದರ್ಶಿಗಳನ್ನ ಮಾಡಿದ್ದಾರೆ. ಸಾಲುತ್ತಿಲ್ಲ ಅಂತ ಮತ್ತೊಂದು ಪಟ್ಟಿ ಕೂಡ ಸಿದ್ದವಾಗಿದೆ. ಬೂತ್ ಮಟ್ಟಕ್ಕೂ ಒಬ್ಬ ರಾಷ್ಟ್ರೀಯ ಕಾರ್ಯದರ್ಶಿ ಮಾಡಿಬಿಡಿ ಎಂದು ಕಾಂಗ್ರೆಸ್ ಪಕ್ಷದ ಕಾಲೆಳೆದಿದ್ದಾರೆ.
ಇದನ್ನೂ ಓದಿ : ಪ್ರತಾಪಗೌಡ ಪಾಟೀಲ್ಗೆ ಎಂಎಲ್ಸಿ ಟಿಕೆಟ್ ನೀಡಿ: ರವಿಗೌಡ
ಹಿಂದುಳಿದವರಿಗೆ ಅನ್ಯಾಯ ಮಾಡಿದ ಮೊದಲ ಸಿಎಂ ಸಿದ್ದರಾಮಯ್ಯ :
ರಾಜ್ಯದಲ್ಲಿ ಹಿಂದುಳಿದವರಿಗೆ ಅನ್ಯಾಯ ಮಾಡಿದ ಮೊದಲ ಮುಖ್ಯಮಂತ್ರಿಯೆಂದರೆ ಅದು ಸಿದ್ದರಾಮಯ್ಯ.. ಟಿಪ್ಪು ಜಯಂತಿ ಮಾಡಿ ಹಿಂದೂ ಸಮುದಾಯವನ್ನ ಹೊಡೆದ್ರು, ಶಾದಿ ಭಾಗ್ಯ ಅಂತ ಮಾಡಿ, ಲೆಕ್ಕ ಮಾಡಿ ಕೆಲವೇ ಕೆಲವು ಮುಸ್ಲಿಮರಿಗೆ ಮಾತ್ರ ನೀಡಿದ್ರು. ಪತ್ರಕರ್ತರಿಗೆ ಹಿಂದುಳಿದ ವರ್ಗದವರಿಗೆ ಲ್ಯಾಪ್ ಟಾಪ್ ನೀಡಿ, ಉಳಿದವರಿಗೆ ಅನ್ಯಾಯ ಮಾಡಿದ್ರು. ಹಿಂದುಳಿದ ವರ್ಗದವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದರು.
ಬಿಜೆಪಿ ಈಗಿರೋದಕ್ಕಿಂತ ಅತಿ ಹೆಚ್ಚು ಪರ್ಸಂಟೇಜ್ ಮೀಸಲಾತಿಯನ್ನ ಓಬಿಸಿ ಗೆ ನೀಡ್ತೀವಿ. ಇತರೆ ಸಮುದಾಯಗಳಿಗೂ ಅನ್ಯಾಯ ಮಾಡದಂತೆ ಮೀಸಲಾತಿ ನೀಡುತ್ತೇವೆ. ಯಾವ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ, ಆ ಸಮುದಾಯವನ್ನೇ ಟಾರ್ಗೆಟ್ ಮಾಡಿ ಅವರಿಗೆ ಮೀಸಲಾತಿ ನೀಡುತ್ತೇವೆ ಎಂದ ಅವರು, ಸಿದ್ದಿ ಸಮುದಾಯಕ್ಕೆ ಇದುವರೆಗೆ ಯಾವುದೇ ನ್ಯಾಯ ಸಿಕ್ಕಿರಲಿಲ್ಲ, ಆದರೆ ಕಾಡಿನಲ್ಲಿದ್ದ ಸಿದ್ದಿಯವರನ್ನ ಎಂಎಲ್ ಸಿ ಮಾಡಿದ್ದು ಬಿಜೆಪಿ ಪಕ್ಷವೇ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.