ಸ್ಥಳೀಯ ಚುನಾವಣೆಯಲ್ಲಿ ಪಕ್ಷ ಸ್ವತಂತ್ರವಾಗಿ ಅಧಿಕಾರ ಹಿಡಿಯುವ ವಿಶ್ವಾಸವಿದೆ: ನಳಿನ್ ಕುಮಾರ್
Team Udayavani, Jul 14, 2021, 12:44 PM IST
ಮೈಸೂರು: ಮುಂಬರುವ ತಾ.ಪಂ., ಜಿ.ಪಂ. ಚುನಾವಣೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಯ ಜಿಲ್ಲಾ ಪಂಚಾಯಿತಿಗಳಲ್ಲೂ ಸ್ವತಂತ್ರವಾಗಿ ಅಧಿಕಾರ ಹಿಡಿಯುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ನಮ್ಮ ಮುಂದೆ ಎರಡು ಚುನಾವಣೆಗಳು ಇವೆ. ಒಂದು ಜಿ.ಪಂ ತಾ.ಪಂ ಹಾಗೂ ವಿಧಾನ ಪರಿಷತ್ ಚುನಾವಣೆ. ಇವೆರಡು ಚುನಾವಣೆಗಳಿಗೆ ಬಿಜೆಪಿ ಸಿದ್ಧವಾಗುತ್ತಿದೆ. ಹೀಗಾಗಿ ರಾಜ್ಯಾದ್ಯಂತ ಪೂರ್ವಭಾವಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಇಂದು ಮೈಸೂರಿನಲ್ಲಿ ಕಾರ್ಯಕಾರಣಿ ಸಭೆ ಮಾಡಿದ್ದೇವೆ. ಕೆಲವೇ ಹೊತ್ತಿನಲ್ಲಿ ಚಾಮರಾಜನಗರಕ್ಕೂ ಹೋಗುತ್ತಿದ್ದೇನೆ. ಅಲ್ಲಿ ಪಕ್ಷದ ಕಚೇರಿ ನಿರ್ಮಾಣ ಕಾಮಗಾರಿ ವೀಕ್ಷಿಸಲು ಹೋಗುತ್ತಿದ್ದೇನೆ ಎಂದರು.
ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್ ಯಶಸ್ಸಿನ ಬಳಿಕ ಒಟ್ಟಿಗೆ ಐಸ್ ಕ್ರೀಮ್ ತಿನ್ನೋಣ: ಸಿಂಧುಗೆ ಪ್ರಧಾನಿ ಮೋದಿ
ಕೆಆರ್ಎಸ್ ಡ್ಯಾಂ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು,ವೈಯಕ್ತಿಕವಾದ ಹೇಳಿಕೆಗಳನ್ನು ಕೊಡುವ ಮುನ್ನ ವೈಚಾರಿಕ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಅದು ಬಿಟ್ಟು ವ್ಯಕ್ತಿಗತವಾಗಿ ಮಾತನಾಡೋದು ಸರಿಯಲ್ಲ. ಇದೆಲ್ಲವನ್ನೂ ಸರ್ಕಾರ ಗಮನಿಸಿದೆ. ಸರ್ಕಾರವೇ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.