ಭಯೋತ್ಪಾದನೆಗೆ ಪೂರಕವಾಗಿ ಎಸ್ ಡಿಪಿಐ ವರ್ತಿಸುತ್ತಿದೆ: ನಳಿನ್ ಕುಮಾರ್ ಕಟೀಲ್
Team Udayavani, Dec 31, 2020, 1:20 PM IST
ಮಂಗಳೂರು: ಗೆದ್ದ ಉನ್ಮಾದದಲ್ಲಿ ಎಸ್ ಡಿಪಿಐ ರಾಷ್ಟ್ರವಿರೋಧಿ ವರ್ತನೆ ತೋರಿಸಿದೆ. ಅದೊಂದು ಭಯೋತ್ಪಾದನಾ ಸಂಸ್ಥೆಯಲ್ಲ ಎಂದು ತಿಳಿದುಕೊಂಡಿದ್ದೆವು. ಆದರೆ ಈಗ ಭಯೋತ್ಪಾದನೆಗೆ ಪೂರಕವಗಿ ವರ್ತಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ ಡಿಪಿಐ ನಡೆ ರಾಷ್ಟವಿರೋಧಿ ಕೃತ್ಯಕ್ಕೆ ಪೂರಕವಾಗಿದೆ. ಅವರು ಭಾರತ್ ಮಾತಕೀ ಜೈ ಘೋಷಣೆ ಕೂಗಬೇಕಿತ್ತು. ಆದರೆ ನಮ್ಮ ಶತ್ರುರಾಷ್ಟ್ರದ ಪರ ಘೋಷಣೆ ಕೂಗಿದ್ದಾರೆ. ಈ ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದರು.
ಪಿಎಫ್ ಐ ತರಹವೇ ಎಸ್ ಡಿಪಿಐ ದೇಶವಿರೋಧಿ ಕೃತ್ಯದಲ್ಲಿ ತೊಡಗಿಸಿಕೊಂಡಿದೆ. ಡಿಜೆ ಹಳ್ಳಿ- ಕೆಜೆ ಹಳ್ಳಿ ಗಲಭೆ, ಸಿಎಎ ಗಲಭೆ, ಕೊಲೆ ಪ್ರಕರಣದಲ್ಲಿ ಎಸ್ ಡಿಪಿಐ ಪಾತ್ರವಿದೆ. ಎಸ್ ಡಿಪಿಐ ಪಕ್ಷವು ಚುನಾವಣಾ ಆಯೋಗದ ವ್ಯಾಪ್ತಿಯಲ್ಲಿ ಬರುತ್ತದೆ. ಇದರ ದೇಶ ವಿರೋಧಿ ಕೃತ್ಯದ ಬಗ್ಗೆ ಆಯೋಗ ಗಮನಿಸುತ್ತಿದೆ ಎಂದರು.
ಇದನ್ನೂ ಓದಿ:ಮುಂದಿನ ಎರಡೂವರೆ ವರ್ಷ ನಾನೇ ಸಿಎಂ:’ಸಂಕ್ರಾಂತಿ ನಂತರದ ಬದಲಾವಣೆ’ ಹೇಳಿಕೆಗೆ ಬಿಎಸ್ ವೈ ಉತ್ತರ
ಎಸ್ ಡಿಪಿಐ ಕಾರ್ಯಕರ್ತರ ವಿರುದ್ದ ನಿರ್ದ್ಯಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಗೃಹ ಸಚಿವರು ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಯಾರದ್ದೋ ಬಂಧನವಾದಾಗ ಕಚೇರಿ ಮುತ್ತಿಗೆ ಮಾಡುತ್ತಾರೆ. ಗಲಭೆ ಸೃಷ್ಟಿ ಮಾಡಲು ಯತ್ನ ಮಾಡುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕರಿಗೆ ಎರಡು ನಾಲಗೆ ಇದೆ. ಗಲಭೆ ಆದಾಗ ಎಸ್ ಡಿಪಿಐ ಜೊತೆ ಸಂಬಂಧ ಇಲ್ಲ ಎನ್ನುತ್ತಾರೆ. ಆದರೆ ಬಂಟ್ವಾಳ ನಗರ ಸಭೆ,ಕೆಲ ಗ್ರಾಮ ಪಂಚಾಯತ್ ನಲ್ಲಿ ಎಸ್ ಡಿಪಿಐ ಜೊತೆ ಮೈತ್ರಿ ಮಾಡಿದೆ. ಬೆಳಗ್ಗೆ ವಿರೋಧ ಮಾಡಿ ರಾತ್ರಿ ಅವರ ಜೊತೆ ಸಭೆ ಮಾಡುತ್ತಾರೆ. ಕಾಂಗ್ರೆಸ್ ಧೈರ್ಯವಿದ್ದರೆ ಎಸ್ ಡಿಪಿಐ ಜೊತೆ ಇದ್ದಾರೋ ಇಲ್ಲವೋ ಎಂದು ನೇರವಾಗಿ ಹೇಳಲಿ ಎಂದು ಸವಾಲೆಸೆದರು.
ಇದನ್ನೂ ಓದಿ: ‘ಪಾಕಿಸ್ಥಾನ್ ಜಿಂದಾಬಾದ್’ ಘೋಷಣೆ ಕೂಗಿದ ವಿಚಾರ: ಮೂರು ಮಂದಿ ವಶಕ್ಕೆ ಪಡೆದು ವಿಚಾರಣೆ
ಕಾಂಗ್ರೆಸ್ ನವರ ದ್ವಂದ್ವ ನಿರ್ಧಾರದಿಂದ ಜನ ಕೈ ಬಿಡುತ್ತಿದ್ದಾರೆ. ಅಲ್ಪಸಂಖ್ಯಾತರೇ ಕಾಂಗ್ರೆಸ್ ಕೈ ಬಿಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.