ನಂಜುಂಡಪ್ಪ ವರದಿ: ಪ್ರತ್ಯೇಕ ಅಧ್ಯಯನ ಅಗತ್ಯ
Team Udayavani, Mar 14, 2020, 3:03 AM IST
ಬೆಂಗಳೂರು: ನಂಜುಂಡಪ್ಪ ವರದಿ ಸಲ್ಲಿಕೆಯಾಗಿ ಎರಡು ದಶಕಗಳಾಗಿವೆ. ಈಗಿನ ವಸ್ತುಸ್ಥಿತಿ ಬೇರೆಯದಾಗಿರು ವುದರಿಂದ ಪ್ರತ್ಯೇಕವಾಗಿ ಸಮಗ್ರ ಅಧ್ಯಯನ ಮಾಡುವ ಅಗತ್ಯವಿದೆ. ಯಾಕೆಂದರೆ ಈಗ ಅತೀ ಹಿಂದುಳಿದ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಸಾಕಷ್ಟು ಬದಲಾವಣೆ ಆಗಿರಬಹುದು ಮತ್ತು ಈಗಿನ ಪರಿಸ್ಥಿತಿ ಆಧರಿಸಿ ಸ್ಥಿತಿಗತಿ ತಳಿಯುವಂತಾಗಲು ಪ್ರತ್ಯೇಕ ಅಧ್ಯಯನ ವರದಿ ಬೇಕಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.
“ಉದಯವಾಣಿ’ ಸಂವಾದದಲ್ಲಿ ಮಾತನಾಡಿ, ಡಾ. ಡಿ.ಎಂ. ನಂಜುಂಡಪ್ಪ ವರದಿ ಆಧಾರದಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ಇದುವರೆಗೂ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಆದರೆ, ಇದುವರೆಗೂ ಯಾವುದೇ ಸರ್ಕಾರಗಳು ಆ ವರದಿ ಆಧಾರದಲ್ಲಿ ಯಾವ ಪ್ರಮಾಣದಲ್ಲಿ ಅಭಿವೃದ್ಧಿಯಾಗಿದೆ ಎನ್ನುವ ಬಗ್ಗೆ ಮೌಲ್ಯಮಾಪನ ಮಾಡಬೇಕಿದೆ. ರಾಜ್ಯದ ಇತರ ಭಾಗಗಳಿಗೆ ಹೋಲಿಕೆ ಮಾಡಿದಾಗ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕೆ ಸ್ಥಾಪನೆ ಸಾಕಷ್ಟು ಹಿಂದುಳಿದಿದೆ.
ನಂಜುಂಡಪ್ಪ ವರದಿ ಆಧಾರದಲ್ಲಿ ಪ್ರತಿ ವರ್ಷ 1500 ಕೋಟಿ ರೂಪಾಯಿ ಮೀಸಲಿಡಲಾಗುತ್ತಿದೆ. ಆದರೆ, ಅದರಿಂದ ಇದುವರೆಗೂ ಆಗಿರುವ ಅಭಿವೃದ್ಧಿ ಬಗ್ಗೆ ಮೌಲ್ಯಮಾಪನ ಮಾಡುವ ಅಗತ್ಯವಿದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಪ್ರತ್ಯೇಕ ಅಧ್ಯಯನ ಸಂಬಂಧ ಮನವಿ ಮಾಡಿದ್ದೆ ಆದರೆ, ಅವರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಲಿಲ್ಲ. ಈಗ ನಮ್ಮ ಸರ್ಕಾರ ಈ ಬಗ್ಗೆ ಮನಸ್ಸು ಮಾಡಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.