ಕಾಂಗ್ರೆಸ್ ವಿರುದ್ಧ ಬಿಜೆಪಿಯಿಂದ ನರಗುಂದ ಬಂದ್ ; ಆಕ್ರೋಶ
Team Udayavani, Jan 3, 2018, 9:18 AM IST
ನರಗುಂದ: ಮಹದಾಯಿ ಹಾಗೂ ಕಳಸಾ-ಬಂಡೂರಿ ನಾಲಾ ಜೋಡಣೆ ಕುರಿತು ಗೋವಾ ಕಾಂಗ್ರೆಸ್ ನಿಲುವು ಖಂಡಿಸಿ ಬಿಜೆಪಿ ಸ್ಥಳೀಯ ಘಟಕ ಬುಧವಾರ ನರಗುಂದ ಬಂದ್ಗೆ ಕರೆ ನೀಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಗಲ್ಲಿಗಲ್ಲಿಗಳಲ್ಲಿ ಟಯರ್ಗಳಿಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಿದ್ದಾರೆ. ಬಿಜೆಪಿ ಪರವಿರುವ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಸತತ ಬಂದ್ ಹೋರಾಟಗಳಿಂದ ಬಸವಳಿದ ನರಗುಂದದಾದ್ಯಂತ ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ವಾಹನ ಸಂಚಾರ, ಸರ್ಕಾರಿ ಬಸ್ಗಳ ಸಂಚಾರ ಸ್ತಬ್ಧಗೊಂಡಿದ್ದು , ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದೆ.
ಮಹದಾಯಿ ನೀರು ತರಲು ಶತಾಯಗತಾಯ ಪಟ್ಟು ಬಿಡದೇ ಹೋರಾಡುತ್ತಿರುವಮಲಪ್ರಭೆ ತಟದ ರೈತರು 903ನೇ ದಿನದ ನಿರಂತರಧರಣಿ ಮುಂದುವರಿಸಿದ್ದಾರೆ.
ಬೆಳಗ್ಗೆ 10 ಗಂಟೆಗೆ ಪುರಸಭೆ ಆವರಣದಿಂದ ಬೃಹತ್ ಪ್ರತಿಭಟನಾ ರ್ಯಾಲಿ ಪ್ರಾರಂಭಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಬಳಿಕ ಹುತಾತ್ಮರೈತನ ವೀರಗಲ್ಲು ಬಳಿ ನಿರ್ಮಿಸಿರುವ ವೇದಿಕೆ ಬಳಿ ಸಮಾವೇಶಗೊಳ್ಳಲಿದ್ದಾರೆ.
ವಿಧಾನಸಭೆವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ, ಶಾಸಕರಾದ ಬಸವರಾಜ ಬೊಮ್ಮಾಯಿ, ಆನಂದ ಮಾಮನಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಸಿ.ಪಾಟೀಲ, ಮಾಜಿ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಕಳಕಪ್ಪ ಬಂಡಿ, ಶ್ರೀಶೈಲಪ್ಪಬಿದರೂರ, ಮಹಾದೇವಪ್ಪ ಯಾದವಾಡ, ಎನ್.ಕೆ. ಪಟ್ಟಣಶೆಟ್ಟಿ, ರಾಮಣ್ಣ ಲಮಾಣಿ
ಪಾಲ್ಗೊಳ್ಳಲಿದ್ದಾರೆ ಎಂದು ನರಗುಂದ ಬಿಜೆಪಿ ಮಂಡಳ ಅಧ್ಯಕ್ಷ ಮಲ್ಲಪ್ಪ ಮೇಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.