ಬೆಳ್ಳಂದೂರು ಕೆರೆ ಬೆಂಕಿ ಪ್ರಕರಣ; ಎನ್ ಜಿಟಿಯಿಂದ ಸ್ವಯಂಪ್ರೇರಿತ ಕೇಸ್
Team Udayavani, Feb 22, 2017, 5:16 PM IST
ಚೆನ್ನೈ/ಬೆಂಗಳೂರು: ಮಹದೇವಪುರದ ಇಬ್ಬಲೂರು ಸಮೀಪದ ಬೆಳ್ಳಂದೂರು ಕೆರೆಯಲ್ಲಿ ಇತ್ತೀಚೆಗೆ ಮತ್ತೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪ್ರಕರಣದಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್ ಜಿಟಿ) ಬಿಡಿಎ, ಬಿಡಬ್ಲ್ಯುಎಸ್ಎಸ್ ಬಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ.
ಎನ್ ಜಿಟಿ ಅಧ್ಯಕ್ಷ ನ್ಯಾ.ಸ್ವತಂತ್ರಕುಮಾರ್ ನೇತೃತ್ವದ ಪೀಠ, ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಂಡ ಬೆಂಕಿ ಪ್ರಕರಣದ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಬಿಡಿಎ, ಮಾಲಿನ್ಯ ನಿಯಂತ್ರಣ ಮಂಡಳಿ, ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿ 2 ವಾರಗಳೊಳಗೆ ಉತ್ತರ ನೀಡುವಂತೆ ಸೂಚಿಸಿದೆ.
ಬೆಳ್ಳಂದೂರು ಕೆರೆ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ತೋರಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಎನ್ ಜಿಟಿ, ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಪ್ರಕರಣದ ವಿಚಾರಣೆಯನ್ನು ಮಾ.20ಕ್ಕೆ ಮುಂದೂಡಿದೆ.
ಎರಡು ವರ್ಷದ ಹಿಂದೆ ಬೆಳ್ಳಂದೂರು ಕೆರೆ ಕೋಡಿಯ ಬಳಿ ನೊರೆಯಲ್ಲಿ ಬೆಂಕಿ ಕಾಣಿಸಿಕೊಂಡು ಜನರಲ್ಲಿ ಆತಂಕ ಉಂಟಾಗಿತ್ತು. ಈಗ ಮತ್ತೊಮ್ಮೆ ಕೆರೆಯಲ್ಲಿ ಬೆಂಕಿ ಆವರಿಸಿರುವುದು ಸ್ಥಳೀಯರು ಗಾಬರಿಗೊಳ್ಳುವಂತೆ ಮಾಡಿತ್ತು. ಎಚ್ಎಎಲ್, ಕೋರಮಂಗಲ, ದೊಮ್ಮಲೂರು, ಶಿವಾಜಿನಗರ, ಮತ್ತು ಹೆಚ್ಎಸ್ಆರ್ ಲೇಔಟ್ ಸೇರಿದಂತೆ ಸುತ್ತಮುತ್ತಲ ಒಳಚರಂಡಿ ನೀರು ಸೇರಿದಂತೆ ಕಾರ್ಖಾನೆಗಳ ತ್ಯಾಜ್ಯಗಳು ನೇರವಾಗಿ ಕೆರೆಗೆ ಸೇರುತ್ತಿರುವುದೇ ಕೆರೆಯ ಮಾಲಿನ್ಯಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದರು.