ರಾತ್ರಿ ಕರ್ಫ್ಯೂ: ಡಿಕೆಶಿ, ಸುಧಾಕರ್ ನಡುವೆ ವಾಕ್ಸಮರ
Team Udayavani, Dec 25, 2020, 11:22 PM IST
ಬೆಂಗಳೂರು: ನೈಟ್ ಕರ್ಫ್ಯೂ ಜಾರಿ ಆದೇಶ ಹಾಗೂ ಹಿಂಪಡೆದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್ ನಡುವೆ ಮಾತಿನ ಸಮರ ಮುಂದುವರಿದಿದೆ.
ರಾತ್ರಿ ಕರ್ಫ್ಯೂ ಜಾರಿ ತೀರ್ಮಾನ ಮುಖ್ಯಮಂತ್ರಿ ಯಡಿಯೂರಪ್ಪ ಅವರದಲ್ಲ. ಸಚಿವ ಸುಧಾಕರ್ ಅವರದಾಗಿತ್ತು. ಅವರಿಗೇನಾದರೂ ಪರಿಜ್ಞಾನ ಇದೆಯೇ ಎಂದು ಡಿ. ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ನೈಟ್ ಕರ್ಫ್ಯೂ ನಿರ್ಧಾರವನ್ನು ಬಹಳ ವಿವೇಚನೆಯಿಂದಲೇ ಕೈಗೊಳ್ಳಲಾಗಿತ್ತು. ಆರೋಗ್ಯ ತಜ್ಞರ ಜತೆ ಚರ್ಚಿಸಿಯೇ ನಿರ್ಧರಿಸಲಾಗಿತ್ತು. ಅದೇನೂ ರಾಜಕೀಯ ನಿರ್ಧಾರ ಅಲ್ಲ ಎಂದು ಸಚಿವ ಸುಧಾಕರ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಶಿವಕುಮಾರ್, ಇಡೀ ಪ್ರಪಂಚ ನಮ್ಮ ರಾಜ್ಯ ಹಾಗೂ ಬೆಂಗಳೂರನ್ನು ಗಮನಿಸುತ್ತಿದೆ. ಹಗಲಲ್ಲಿ ಸೋಂಕು ಬರದೆ ರಾತ್ರಿ ಮಾತ್ರ ಬರುತ್ತದೆಯೇ? ಪರಿಜ್ಞಾನ ಇರುವವರು ಯಾರೂ ಇಂತಹ ನಿರ್ಧಾರಕ್ಕೆ ಬರುವುದಿಲ್ಲ. ರಾತ್ರಿ 11 ಗಂಟೆ ಮೇಲೆ ಯಾರು ಓಡಾಡುತ್ತಾರೆ? ಎಂದು ಪ್ರಶ್ನಿಸಿದರು.
ಇಡೀ ವರ್ಷ ಜನ ನರಳಿದ್ದಾರೆ. ಇವರು ಯಾರ ಅಭಿಪ್ರಾಯವನ್ನೂ ಪಡೆಯದೆ ಏಕಾಏಕಿ ನಿರ್ಧಾರ ತೆಗೆದುಕೊಂಡದ್ದು ಯಾಕೆ? ಇವರಿಗೆ ಯಾರಾದರೂ ತಜ್ಞರು ರಾತ್ರಿ ವೇಳೆ ಕರ್ಫ್ಯೂ ಮಾಡಿದರೆ ಸೋಂಕು ಬರುವುದಿಲ್ಲ ಎಂದು ಸಲಹೆ ನೀಡಿದ್ದಾರಾ? ಇದು ಸಾಮಾನ್ಯ ಜ್ಞಾನದ ವಿಚಾರ. ಇದರಲ್ಲಿ ಯಾವುದೇ ವಿಜ್ಞಾನ ಅಡಗಿಲ್ಲ ಎಂದು ಡಿಕೆಶಿ ಹೇಳಿದರು.
ಪ್ರಚಾರ ಸಿಗುತ್ತದೆಂದು ಅವರಿಗೆ ಇಷ್ಟಬಂದಂತೆ ತೀರ್ಮಾನ ಮಾಡಿದರೆ ಕೇಳಲು ಸಾಧ್ಯವೇ? ಈ ಸರಕಾರ ಬಂದ ಮೇಲೆ ಎಷ್ಟು ನಿರ್ಧಾರಗಳಲ್ಲಿ ಯೂ ಟರ್ನ್ ಹೊಡೆದಿದೆ ಎಂದು ಲೆಕ್ಕ ಹಾಕಿ ಎಂದರು.
ಸುಧಾಕರ್ ತಿರುಗೇಟು
ಇದಕ್ಕೆ ಪ್ರತಿಕ್ರಿಯಿಸಿದ ಡಾ| ಸುಧಾಕರ್, ನೈಟ್ ಕರ್ಫ್ಯೂ ನಿರ್ಧಾರ ವನ್ನು ಬಹಳ ವಿವೇಚನೆ ಯಿಂದಲೇ ಕೈಗೊಳ್ಳಲಾಗಿತ್ತು. ಅದೇನೂ ರಾಜಕೀಯ ನಿರ್ಧಾರ ಅಲ್ಲ. ನಮ್ಮ ಸರಕಾರ ಉತ್ತಮವಾದ ನಿರ್ಧಾರಗಳಿಂದ ಕೊರೊನಾವನ್ನು ನಿಯಂತ್ರಿಸಿದೆ. ಸರಕಾರದ ಕ್ರಮಗಳಿಂ ದಾಗಿ ಸೋಂಕಿಗೊಳಗಾದವರಲ್ಲಿ ಶೇ. 97.5ರಷ್ಟು ಮಂದಿ ಗುಣಮುಖ ರಾಗಿದ್ದಾರೆ. ಸಾವಿನ ಪ್ರಮಾಣ ಶೇ.1.22ಕ್ಕೆ ಇಳಿದಿದೆ ಎಂದರು.
ಬ್ರಿಟನ್ನಲ್ಲಿ ಲಾಕ್ಡೌನ್ ಆಗಿದೆ, ಜರ್ಮನಿಯಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ. ಹಾಗೆಂದು ಅಲ್ಲಿ ಇರುವವರಿಗೆ ಬುದ್ಧಿ ಇಲ್ಲ ಎಂದರ್ಥವಲ್ಲ. ಪ್ರತಿಯೊಂದು ತೀರ್ಮಾನವನ್ನೂ ಆರೋಗ್ಯ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದವರ ಜತೆ ಕೂಲಂಕಷವಾಗಿ ಚರ್ಚಿಸಿ ತೆಗೆದುಕೊಳ್ಳಲಾಗಿದೆ ಎಂದರು.
ಬ್ರಿಟನ್ನಿಂದ ರಾಜ್ಯಕ್ಕೆ ಬಂದವರಲ್ಲಿ 10 ಜನರಿಗೆ ಕೊರೊನಾ ಪಾಟಿಸಿವ್ ಆಗಿದೆ ಎಂದು ತಿಳಿದುಬಂದಿದ್ದು, ಹತ್ತು ಜನರ ಮಾದರಿಯನ್ನು ನಿಮ್ಹಾ ನ್ಸ್ಗೆ ಕಳುಹಿಸಲಾಗಿದೆ. ಜೆನೆಟಿಕ್ ಸೀಕ್ವೆನ್ಸ್ ಮಾಡಲು 2-3 ದಿನ ಬೇಕಾಗಿದೆ. ಒಂದು ವೇಳೆ ಅವರಲ್ಲಿ ಹೊಸ ಪ್ರಭೇದದ ವೈರಸ್ ಖಚಿತವಾದರೆ, ಅಗತ್ಯ ಕ್ರಮ ಕೈಗೊಳ್ಳಲಾಗುವುದು.
– ಡಾ| ಕೆ. ಸುಧಾಕರ್ ಆರೋಗ್ಯ ಸಚಿವರು