ನಿಜಾಮುದ್ದೀನ್; ರಾಜ್ಯದ 19 ಮಂದಿಗೆ ಸೋಂಕು
Team Udayavani, Apr 4, 2020, 9:53 AM IST
ಬೆಂಗಳೂರು: ನಿಜಾಮುದ್ದೀನ್ ತಬ್ಲಿಘಿ ಜಮಾತ್ಗೆ ಹೋಗಿದ್ದವರ ಪೈಕಿ 288 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. 200 ಮಂದಿ ಪರೀಕ್ಷಾ ವರದಿಗಳ ಫಲಿತಾಂಶ ಬಂದಿದ್ದು, ಇದರಲ್ಲಿ 187 ನೆಗೆಟಿವ್, 19 ಪಾಸಿಟಿವ್ ಎಂದು ದೃಢವಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಜಾಮುದ್ದೀನ್ ಧಾರ್ಮಿಕ ಸಮಾವೇಶ ನಡೆಯುತ್ತಿರುವ ಸಂದರ್ಭದಲ್ಲಿ ಆ ಪ್ರದೇಶದಲ್ಲಿದ್ದರ ಕುರಿತು ಕೇಂದ್ರ ಸರಕಾರ ನೀಡಿರುವ ಅಂಕಿ ಅಂಶಗಳನ್ನು ವಿಂಗಡಣೆ ಮಾಡಲಾಗುತ್ತಿದೆ. ಸ್ಪಷ್ಟವಾಗಿ ಎಷ್ಟು ಮಂದಿ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ್ದರು ಎಂಬುದನ್ನು ನಿಖರ ತನಿಖೆ ಮಾಡಿ ಶೀಘ್ರದಲ್ಲಿ ತಿಳಿಸಲಾಗುವುದು ಎಂದರು.
ಕಟ್ಟಡ ಕಾರ್ಮಿಕರ ಮಂಡಳಿಯಿಂದ 15 ಲಕ್ಷ ಕಾರ್ಮಿಕರಿಗೆ ಈಗಾಗಲೇ 1,000 ರೂ ನೀಡಲಾಗಿದೆ. ಇನ್ನೂ 1,000ರೂ. ನೀಡಲು ಮುಖ್ಯಮಂತ್ರಿಗಳು ಸೂಚಿಸಿದ್ದು, ಶನಿವಾರ ಎಲ್ಲರ ಖಾತೆಗೆ ಹಣ ಬೀಳಲಿದೆ. ಸರಕಾರದ ಬಳಿ ಪಡಿತರ ಆಹಾರ ಅಗತ್ಯ ಪ್ರಮಾಣದಲ್ಲಿ ಸಂಗ್ರಹವಿದ್ದು ಪಡಿತರ ವಿತರಣೆಗೆ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಮಾತನಾಡಿ, ನಿಜಾಮುದ್ದೀನ್ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದವರನ್ನು ಸರಕಾರಿ ಕ್ವಾರೈಂಟೆನ್ನಲ್ಲಿಡಲಾಗಿದೆ ಎಂದರು.