ನನ್ನತ್ರ ಯಾವ ಲಾಬಿಯೂ ನಡೆಯಲ್ಲ: ರೆಡ್ಡಿ ಖಡಕ್ ವಾರ್ನಿಂಗ್
Team Udayavani, Sep 9, 2017, 12:41 PM IST
ಬೆಂಗಳೂರು : ಚುನಾವಣಾ ಹೊಸ್ತಿಲಲ್ಲಿ ನೂತನ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಆರ್.ರಾಮಲಿಂಗಾ ರೆಡ್ಡಿ ಅವರು ಶುಕ್ರವಾರ ವಿಕಾಸಸೌಧದಲ್ಲಿ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆ ನಡೆಸಿದರು. ವಿಶೇಷವೆಂದರೆ ಪಾರದರ್ಶಕತೆಯನ್ನು ತೋರುವುದಕ್ಕಾಗಿ ಸಭೆಯಲ್ಲಿ ಪಾಲ್ಗೊಳ್ಳಲು ಮಾಧ್ಯಮ ಪ್ರತಿನಿಧಿಗಳಿಗೂ ಅವಕಾಶ ನೀಡಲಾಗಿತ್ತು.
ಪೊಲೀಸರಿಗೆ ಖಡಕ್ ಸೂಚನೆ ನೀಡಿದ ರಾಮಲಿಂಗಾ ರೆಡ್ಡಿ ‘ನನ್ನ ಹತ್ರ ಯಾವುದೇ ಲಾಬಿ ನಡೆಯುವುದಿಲ್ಲ. ನಾನು ಅವ್ರ ಕಡೆಯೋನು, ಇವ್ರ ಕಡೆಯೋನು ಅಂದ್ರೆ ಆಗಲ್ಲ’ ಎಂದರು.
ರೌಡಿಗಳನ್ನು ಮಟ್ಟ ಹಾಕಿ ಇಲ್ಲದಿದ್ದರೆ ರಾಜ್ಯದಿಂದ ಗಡಿಪಾರು ಮಾಡಿ ಎಂದು ಖಡಕ್ ಸೂಚನೆ ನೀಡಿದರು.
ಮೀಟರ್ ಬಡ್ಡಿ ದಂಧೆ ನಡೆಸುವವರು ಯಾರೆಂದು ನಿಮಗೆ ಗೊತ್ತು ಅಂತಹವರ ವಿರುದ್ಧ ಕೂಡಲೇ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದರು.
ಸಣ್ಣ ಪುಟ್ಟ ಗಲಾಟೆಗೆ ಗೂಂಡಾ ಕಾಯಿದೆ ಅಡಿ ಪ್ರಕರಣ ದಾಖಲಿಸಬೇಡಿ. ಇದರಿಂದ ಅಪ್ರಾಪ್ತ ವಯಸ್ಕರ ಜೀವನ ಹಾಳಾಗುತ್ತದೆ. ಅವರಿಗೆ ಬುದ್ದಿ ಹೇಳಿ ಸರಿ ದಾರಿಗೆ ತನ್ನಿ. ಆದರೆ ಪದೇ ಪದೇ ಗೂಂಡಾಗಿರಿ ಮಾಡಿದರೆ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದರು.
ವಿದೇಶಿಯರು ಇರುವ ಕಡೆ ಕಾನೂನು ವ್ಯವಸ್ಥೆ ಹಾಳಾಗುತ್ತಿದೆ. ಅಂತಹ ಪ್ರದೇಶದ ಬಗ್ಗೆ ಹೆಚ್ಚು ಗಮನ ಹರಿಸಿ ಭದ್ರತೆ ನೀಡಿ ಎಂದರು.
ಸಭೆಯಲ್ಲಿ ಡಿಜಿ, ಐಜಿಪಿ ಆರ್.ಕೆ.ದತ್ತಾ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ , ರಾಜ್ಯದ ಎಲ್ಲಾ ಎಸ್ಪಿಗಳು,ಬೆಂಗಳೂರು ನಗರದ ಎಲ್ಲಾ ಎಸ್ಐಗಳು , ಸಂಚಾರಿ ಇನ್ಸ್ಪೆಕ್ಟರ್ಗಳು ಭಾಗಿಯಾಗಿದ್ದರು.
ಕೆಂಪಯ್ಯಗೆ ನೋ ಎಂಟ್ರಿ
ಗೃಹ ಸಚಿವಾಲಯದ ಸಲಹೆಗಾರರಾಗಿದ್ದ ಕೆಂಪಯ್ಯ ಅವರನ್ನು ಇಂದಿನ ಮಹತ್ವದ ಸಭೆಯಿಂದ ದೂರ ಇರಿಸಿದ್ದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.