ಚುನಾವಣೆವರೆಗೂ ಯಾರೂ ಮಲಗಬಾರದು : ಕೈ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಕರೆ
ಸಿದ್ದರಾಮೋತ್ಸವವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ : ಡಿ.ಕೆ.ಶಿವಕುಮಾರ್
Team Udayavani, Jul 7, 2022, 3:48 PM IST
ಬೆಂಗಳೂರು: ಮುಂದಿನ ಚುನಾವಣೆವರೆಗೂ ಯಾರೂ ಮಲಗಬಾರದು. ಬಿಜೆಪಿ ವಿರುದ್ಧ ನಿರಂತರ ಹೋರಾಟ ನಡೆಸಬೇಕು ಎಂದು ಪದಾಧಿಕಾರಿಗಳ ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಬಿಜೆಪಿ ಸುಳ್ಳನ್ನೇ ಹತ್ತು ಭಾರಿ ಹೇಳಿ ಸತ್ಯವೆಂದು ಬಿಂಬಿಸುತ್ತಿದೆ. ನಾವು ಸತ್ಯ ಹೇಳಿದರೂ ಜನರಿಗೆ ಮನವರಿಕೆ ಮಾಡಿಕೊಡಲು ಆಗುತ್ತಿಲ್ಲ. ನಾವು ಇನ್ನಷ್ಟು ಪರಿಣಾಮಕಾರಿಯಾಗಿ ಸರ್ಕಾರದ ವಿರುದ್ಧ ದೊಡ್ಡ ಹೋರಾಟ ನಡೆಸಬೇಕು. ಸತ್ಯವನ್ನ ಜನರಿಗೆ ತಲುಪುವಂತೆ ಮಾಡಬೇಕು ಎಂದರು.
ಪದಾಧಿಕಾರಿಗಳ ಸಭೆಯಲ್ಲಿ ಸಿದ್ದರಾಮೋತ್ಸವಕ್ಕೆ ಖುದ್ದು ಆಹ್ವಾನ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾನು ವೈಯಕ್ತಿಕವಾಗಿ ಯಾರಿಗೂ ಆಹ್ವಾನ ನೀಡಿಲ್ಲ. ರಾಹುಲ್ ಗಾಂಧಿ ಅವರನ್ನ ಹೊರತುಪಡಿಸಿ ಯಾರನ್ನೂ ಕರೆದಿಲ್ಲ. ಎಲ್ಲರೂ ಅವರಾಗಿಯೇ ಬರುತ್ತಿದ್ದಾರೆ.ಯಾವ ಪಕ್ಷದವರಿಗೂ ಆಹ್ವಾನ ಕೊಟ್ಟಿಲ್ಲ. ಅಭಿಮಾನಿಗಳು ಸಮಾವೇಶ ಮಾಡಲು ನಿರ್ಧರಿಸಿದ್ದಾರೆ. ನೀವೆಲ್ಲರೂ ಸಹಕರಿಸಿ. ಇದೇ ತಿಂಗಳ 13 ರಂದು ಅರಮನೆ ಮೈದಾನದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಲಿದೆ. ಇದಕ್ಕೆ ಜಿಲ್ಲಾಧ್ಯಕ್ಷರಿಗೂ ಆಹ್ವಾನ ನೀಡಲಾಗಿದೆ. ನೀವೆಲ್ಲರೂ ಭಾಗವಹಿಸಿ
ಎಂದು ಮನವಿ ಮಾಡಿದರು.
ಎಲ್ಲರೂ ಸೇರಿ ಯಶಸ್ವಿಗೊಳಿಸೋಣ
ವಿರೋಧ ಪಕ್ಷದ ನಾಯಕರು75 ವರ್ಷಕ್ಕೆ ಕಾಲಿಡುತ್ತಿದ್ದಾರೆ. ಪಕ್ಷದ ಚೌಕಟ್ಟಿನಲ್ಲಿ ದಾವಣಗೆರೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಪಕ್ಷದ ವೇದಿಕೆಯಲ್ಲೇ ಸಮಾವೇಶ ನಡೆಯಲಿದೆ. ರಾಹುಲ್ ಗಾಂಧಿ ಅವರೂ ಭಾಗವಹಿಸುತ್ತಿದ್ದಾರೆ. ಎಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದು ಪದಾಧಿಕಾರಿಗಳ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಫ್ರೀಡಂ ವಾಕ್ ಮಾಡಲು ತಿರ್ಮಾನ
ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಸಂಬಂಧ ಸುದೀರ್ಘ ಚರ್ಚೆ ನಡೆಸಲಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಫ್ರೀಡಂ ವಾಕ್ ಮಾಡಲು ತಿರ್ಮಾನ ಕೈಗೊಳ್ಳಲಾಗಿದೆ. ಪ್ರತಿ ಜಿಲ್ಲೆಯಲ್ಲಿ ೭೫ ಕಿಮಿ ಪಥಸಂಚಲನ ಮಾಡಲು ನಿರ್ಧರಿಸಲಾಗಿದ್ದು, ತಿರಂಗಾ ಬಾವುಟಾ ಹಿಡಿದು ಪಥ ಸಂಚಲನ ನಡೆಸಲಾಗುತ್ತಿದ್ದು, ಅಗಸ್ಟ 15 ರಂದು ರಾಜ್ಯದ ಎಲ್ಲೆಡೆಯಿಂದ ಜನರನ್ನು ಆಹ್ವಾನಿಸಿ ಬೆಂಗಳೂರಿನ ಬಸವನಗುಡಿ ಕಾಲೇಜು ಮೈದಾನದಲ್ಲಿ ವಿಶೇಷ ಬೃಹತ್ ಕಾರ್ಯಕ್ರಮ ನಡೆಸಲು ತೀರ್ಮಾನ ಕೈಗೊಳ್ಳಲಾಗಿದ್ದು, ಶಿವಪುರ, ವಿಧುರಾಶ್ವತ್ಥ ಬೆಳಗಾವಿಯಂತಹ ಐತಿಹಾಸಿಕ ಸ್ಥಳದಲ್ಲಿ ರಾಜ್ಯ ನಾಯಕರ ಭೇಟಿ ನೀಡಲಿದ್ದಾರೆ.
ಮುಂದಿನ ಹತ್ತು ತಿಂಗಳು ಕನಿಷ್ಠ 20 ದಿನ ವಹಿಸಿದ ಜವಾಬ್ದಾರಿ ನಿಭಾಯಿಸಬೇಕು. ಹೊಸಬರಿಗೆ ಅವಕಾಶ ಕೊಡುವಂತೆ ಸೂಚನೆ ನೀಡಿ, ಭಾರತದ 75 ವರ್ಷದ ಅಮೃತ ಮಹೋತ್ಸವ ಆಚರಣೆಗೆ ತೀರ್ಮಾನ ಮಾಡಲಾಗಿದ್ದು, ಎಲ್ಲಾ ಜಿಲ್ಲೆಗಳಲ್ಲೂ 75 ಕಿಮೀ ಪಾದಯಾತ್ರೆ ಪ್ರತಿ ತಾಲೂಕು, ನಗರ, ಹಳ್ಳಿಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನೀಡುವಂತೆ ಸೂಚನೆ ನೀಡಿದರು.
ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿಯವರೆಗೂ ಫ್ರೀಡಂ ರ್ಯಾಲಿ ನಡೆಯಲಿದೆ. ಆಗಸ್ಟ್15 ರಂದು ಒಂದು ಲಕ್ಷ ಜನರನ್ನ ಸೇರಿಸಿ ರ್ಯಾಲಿ ನಡೆಸಲಾಗುತ್ತಿದ್ದು, ಇದನ್ನ ಪಕ್ಷಾತೀತವಾಗಿ ಆಯೋಜಿಸಲಾಗಿದೆ ಎಂದರು.