ಸುಮಲತಾ ಸ್ಪರ್ಧೆಯ ಚರ್ಚೆ ನಡೆದಿಲ್ಲ : ಸಿದ್ದು
Team Udayavani, Feb 3, 2019, 12:30 AM IST
ಮಂಗಳೂರು: ಲೋಕಸಭಾ ಚುನಾ ವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ನಿಂದ ಸುಮಲತಾ ಅವರು ಸ್ಪರ್ಧಿಸುವ ಬಗ್ಗೆ ಪಕ್ಷದಲ್ಲಿ ಇದುವರೆಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಭಾಗ ವಹಿಸಲು ಆಗಮಿಸಿದ ಸಂದರ್ಭ ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಪತ್ರಕರ್ತರ ಜತೆ ಅವರು ಮಾತನಾಡಿದರು.
ಯಾವ್ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂಬ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಒಟ್ಟು ಸೇರಿ ಚರ್ಚೆ ನಡೆಸುತ್ತಾರೆ. ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು ಎಂಬುದನ್ನು ನೋಡಿಕೊಂಡು ಟಿಕೆಟ್ ಹಂಚಿಕೆ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಅವರೇನ್ರಿ ಮಾತನಾಡುತ್ತಾರೆ?
ಸಮ್ಮಿಶ್ರ ಸರಕಾರದಲ್ಲಿ ಇಬ್ಬರು ಮುಖ್ಯಮಂತ್ರಿ ಗಳು ಇದ್ದಾರೆ ಎಂಬ ಬಿಜೆಪಿಯವರ ಟೀಕೆಗೆ ಪ್ರತಿಕ್ರಿಯಿಸಿ, ಬಿಜೆಪಿ 5 ವರ್ಷಗಳಲ್ಲಿ 3 ಮುಖ್ಯ ಮಂತ್ರಿಗಳನ್ನು ಕಂಡಿದೆ. ಅವರೇನ್ರಿ ಮಾತನಾಡುತ್ತಾರೆ ನಮ್ಮ ಬಗ್ಗೆ ಎಂದು ಪ್ರಶ್ನಿಸಿದರು.
ಸಚಿವ ಡಿ.ಕೆ. ಶಿವಕುಮಾರ್ ಅವರ ದಿಲ್ಲಿಯ ನಿವಾಸದ ಮೇಲೆ ಇಡಿ ದಾಳಿ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಇಡಿ ದಾಳಿ ವಿಚಾರ ನನಗೆ ಗೊತ್ತಿಲ್ಲ. ಇದರ ವಿರುದ್ಧ ಶಿವಕುಮಾರ್ ಅವರು ಕಾನೂನು ಹೋರಾಟ ನಡೆಸುತ್ತಾರೆ ಎಂದರು.