ಪರಿಷತ್ತಿನಲ್ಲೂ ಸಂತಾಪ ಸೂಚನೆ
Team Udayavani, Feb 18, 2020, 3:00 AM IST
ವಿಧಾನ ಪರಿಷತ್ತು: ಸಂಪುಟ ರಚನೆಯಾದ ನಂತರ ನಡೆಯುತ್ತಿರುವ ಮೊದಲ ಅಧಿವೇಶನದ ಮೊದಲ ದಿನ ಮೇಲ್ಮನೆಯಲ್ಲಿ ಅಗಲಿದ ವಿವಿಧ ಕ್ಷೇತ್ರಗಳ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
ಸೋಮವಾರ ಸದನ ಆರಂಭವಾಗುತ್ತಿದ್ದಂತೆ ಸಭಾಪತಿ ಪ್ರತಾಪ್ಚಂದ್ರ ಶೆಟ್ಟಿ ಅವರು, ಕರ್ನಾಟಕದ ಮಾಜಿ ರಾಜ್ಯಪಾಲ ಟಿ.ಎನ್. ಚತುರ್ವೇದಿ ಸೇರಿದಂತೆ ಧಾರ್ಮಿಕ, ರಾಜಕೀಯ, ಸಾಹಿತ್ಯ, ಸಾಂಸ್ಕೃತಿಕ, ವಿಜ್ಞಾನ ಕ್ಷೇತ್ರದಲ್ಲಿನ 17 ಜನ ಅಗಲಿದ ಗಣ್ಯರ ಸಾಧನೆಗಳ ಮೆಲುಕು ಹಾಕಿ, ಸಂತಾಪ ಸೂಚಿಸಿದರು. ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿದರು.
ಕಾಂಗ್ರೆಸ್ ಸದಸ್ಯ ಸಿ.ಎಂ.ಇಬ್ರಾಹಿಂ, ಅಗಲಿದ ಗಣ್ಯರ ಕುರಿತು ಮಾತನಾಡಲು ನಮಗೂ ಅವಕಾಶ ಕೊಡಿ ಎಂದರು. ಆಗ ಸಭಾಪತಿಗಳು, ಸಭೆ ಅನುಮತಿ ನೀಡಿದರೆ, ತಮಗೂ ಅವಕಾಶ ನೀಡಲಾಗುವುದು ಎಂದರು. ನಂತರ, ಒಂದು ನಿಮಿಷ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು. ಇದಕ್ಕೂ ಮುನ್ನ ರಾಜ್ಯಪಾಲರ ವಿಧಾನಮಂಡಲದ ಭಾಷಣದ ಪ್ರತಿಯನ್ನು ಮೇಲ್ಮನೆಯಲ್ಲಿ ಮಂಡಿಸಲಾಯಿತು.