10ರಂದು ರೈತರಿಂದ ರಾಜ್ಯಾದ್ಯಂತ ಹೆದ್ದಾರಿ ಬಂದ್
Team Udayavani, Jun 1, 2019, 3:00 AM IST
ಬೆಂಗಳೂರು: ಸರ್ಕಾರ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಹಿಂಪಡೆಯಬೇಕು, ಬರ ಪರಿಹಾರ ಕೆಲಸ ಚುರುಕುಗೊಳಿಸಬೇಕು ಎಂದು ಆಗ್ರಹಿಸಿ ಜೂನ್ 10ಕ್ಕೆ ರಾಜ್ಯಾದ್ಯಂತ ಹೆದ್ದಾರಿ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭೂಸ್ವಾಧೀನ ಕಾಯ್ದೆ-2014 ಕ್ಕೆ ಸಮ್ಮಿಶ್ರ ಸರ್ಕಾರ ತಿದ್ದುಪಡಿ ತರುವ ಮೂಲಕ ರೈತರಿಗೆ ದ್ರೋಹವೆಸಗಿದೆ. ಕಾಯ್ದೆಯಲ್ಲಿದ್ದ ಆರು ಮಹತ್ವದ ಅಂಶಗಳನ್ನು ಕೈಬಿಡಲಾಗಿದ್ದು, ಸರ್ಕಾರ ರಿಯಲ್ ಎಸ್ಟೇಟ್ ಮಾಡುವವರಿಗೆ ಅನುಕೂಲ ಮಾಡಿಕೊಡಲು ಹೊರಟಿದೆ ಎಂದು ಹೇಳಿದರು. ರಾಜ್ಯದಲ್ಲಿ ಬರಗಾಲ ಕಳೆದ ವರ್ಷಕ್ಕಿಂತ ಈ ವರ್ಷ ತೀವ್ರ ಪ್ರಮಾಣದಲ್ಲಿದೆ.
ಆದರೆ, ಸಮ್ಮಿಶ್ರ ಸರ್ಕಾರದ ನಾಯಕರು ತಮ್ಮ ಕುರ್ಚಿ ಉಳಿಸಿಕೊಳ್ಳುವ ಕೆಲಸದಲ್ಲಿ ತೊಡಗಿದ್ದಾರೆ. ರೈತರ ಸಾಲಮನ್ನಾ ಮೂಲಕ ರೈತರ ಪರವಾಗಿದ್ದೇವೆ ಎಂದು ಹೇಳಿಕೊಳ್ಳುವ ಸರ್ಕಾರ, ಭೂಸ್ವಾಧೀನ ಕಾಯ್ದೆ ತಿದ್ದುಪಡಿ ತರುವ ಮೂಲಕ ಮರಣಶಾಸನ ಜಾರಿಗೆ ತಂದಿದೆ. ಇದನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.