ಒಂದೇ ದಿನ ಅಮಿತ್, ರಾಹುಲ್ ರಾಜ್ಯ ಪ್ರವಾಸ
Team Udayavani, Aug 2, 2017, 6:05 AM IST
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಒಂಭತ್ತು ತಿಂಗಳು ಬಾಕಿ ಇರುವಾಗಲೇ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯ ನಾಯಕರು ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆಗಸ್ಟ್ 12 ರಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಇದರಿಂದ ಸಹಜವಾಗಿ ರಾಜ್ಯ ರಾಜಕೀಯ ರಂಗೇರುತ್ತಿದೆ. ರಾಹುಲ್ ಗಾಂಧಿ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಯುಪಿಎ ಸರ್ಕಾರದ ಅವಧಿಯಲ್ಲಿ ವಿಶೇಷ ಸ್ಥಾನ ಮಾನ ನೀಡಿರುವುದನ್ನು ಜನರಿಗೆ ನೆನಪಿಸಿ, ಆ ಮೂಲಕ ರಾಜ್ಯದಲ್ಲಿ ಪರೋಕ್ಷವಾಗಿ 2018 ರ ಚುನಾವಣೆಗೆ ಮುನ್ನುಡಿ ಬರೆಯುವ ಲೆಕ್ಕಾಚಾರದಲ್ಲಿದ್ದಾರೆ.
ಇನ್ನು ಆಗಸ್ಟ್ 12 ರಿಂದ ಮೂರು ದಿನ ರಾಜ್ಯ ಪ್ರವಾಸ ಕೈಗೊಳ್ಳಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, 2018ರ ಚುನಾವಣೆಯನ್ನೇ ಗುರಿಯಾಗಿಸಿಕೊಂಡು ರಣತಂತ್ರ ರೂಪಿಸುವ ಅಜೆಂಡಾದೊಂದಿಗೆ ಆಗಮಿಸುತ್ತಿದ್ದಾರೆ. ಮೂರು ದಿನ ವಿವಿಧ ಮೋರ್ಚಾಗಳ ಸಭೆಗಳು, ಪ್ರಕೋಷ್ಠಗಳೊಂದಿಗೆ ಪ್ರತ್ಯೇಕ ಸಭೆ ನಡೆಸಲು ತೀರ್ಮಾಸಿದ್ದಾರೆ. 25 ಕ್ಕೂ ಹೆಚ್ಚು ಸಭೆಗಳನ್ನು ಶಾ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಅಮಿತ್ ಶಾ ಭೇಟಿಯ ಹಿನ್ನೆಲೆಯಲ್ಲಿ ಅವರ ಆಪ್ತ ಅರವಿಂದ್ ಮೆನನ್ ಈಗಾಗಲೇ ರಾಜ್ಯದಲ್ಲಿ ಪೂರ್ವ ಸಿದ್ದತೆ ಸಭೆಗಳನ್ನು ನಡೆಸಿದ್ದಾರೆ. ರಾಜ್ಯದ ಸದ್ಯದ ರಾಜಕೀಯ ವಿದ್ಯಮಾನ, ಪ್ರತ್ಯೇಕ ಧ್ವಜ, ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ, ಮಂಗಳೂರು ಕೋಮು ಗಲಭೆ ವಿಷಯಗಳ ಬಗ್ಗೆ ಬಿಜೆಪಿ ನಿಲುವಿನ ಕುರಿತಂತೆಯೂ ಮೂರು ದಿನದ ಅವಧಿಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ. ಆಗಮನಕ್ಕೂ ಮೊದಲೇ ಪೂರ್ಣ ಚಿತ್ರಣವನ್ನು ಶಾ ಅವರಿಗೆ ನೀಡುವ ಜವಾಬ್ದಾರಿ ಅರವಿಂದ್ ಮೆನನ್ ಮೇಲಿದೆ.
ಆಗಸ್ಟ್ 12 ರಿಂದ 14 ರ ವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಗಳೂರಿಗೆ ಆಗಮಿಸಲಿದ್ದಾರೆ. ಚರ್ಚೆ ಮಾಡುವ ವಿಚಾರಗಳ ಬಗ್ಗೆ ಮಾಹಿತಿ ಹಂಚಿ ಕೊಳ್ಳಲು ಅರವಿಂದ ಮೆನೆನ್ ಬಂದಿದ್ದಾರೆ ಎಂದು ಮಂಗಳವಾರ ಬಿಜೆಪಿ ವಕ್ತಾರ ಸುರೇಶ್ ಕುಮಾರ್ ತಿಳಿಸಿದ್ದಾರೆ.