ಚಾರ್ಮಾಡಿಯಲ್ಲಿ ಒಂದು ತಿಂಗಳು ಸಂಚಾರ ನಿಷೇಧ
Team Udayavani, Aug 15, 2019, 3:00 AM IST
ಚಿಕ್ಕಮಗಳೂರು/ಮಂಗಳೂರು: ಚಾರ್ಮಾಡಿ ಘಾಟಿ ಭಾಗದಲ್ಲಿ ಗುಡ್ಡ ಕುಸಿತ ಉಂಟಾಗುತ್ತಿರುವ ಕಾರಣ ಸೆ.14ರ ಮಧ್ಯರಾತ್ರಿಯವರೆಗೆ ಎಲ್ಲ ವಾಹನಗಳ ಸಂಚಾರವನ್ನು ನಿಷೇಧಿಸಿ ದ.ಕ.ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಆದೇಶಿಸಿದ್ದಾರೆ. ಚಾರ್ಮಾಡಿಯಲ್ಲಿ ಆ.8 ರಿಂದ ಭಾರೀ ಮಳೆಯಾಗುತ್ತಿದ್ದು, ಆ.10ರಂದು ಬಿರು ಗಾಳಿ ಸಹಿತ ಸುರಿದ ಭಾರೀ ಮಳೆಯಿಂದ ಗುಡ್ಡ ಕುಸಿತ ಉಂಟಾಗಿದೆ. ಹೀಗಾಗಿ, ರಸ್ತೆ ಸಂಪೂರ್ಣ ಹಾಳಾಗಿದೆ.
ಈ ರಸ್ತೆಯನ್ನು ಪೂರ್ಣ ಮಟ್ಟದಲ್ಲಿ ದುರಸ್ತಿಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲು ಇನ್ನೂ ಒಂದು ತಿಂಗಳ ಕಾಲಾವ ಕಾಶ ಬೇಕಾಗಿರುವುದರಿಂದ ಒಂದು ತಿಂಗಳವರೆಗೆ ಸಂಚಾರ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ವಾಹನ ಸವಾರರು ಉಜಿರೆ-ಧರ್ಮಸ್ಥಳ-ಕೊಕ್ಕಡ-ಗುಂಡ್ಯ-ಶಿರಾಡಿ (ರಾ.ಹೆ 75) ಮುಖಾಂತರ ಸಂಚರಿಸಬಹುದು ಅಥವಾ ಮೂಡಿಗೆರೆ ಹ್ಯಾಂಡ್ ಪೋಸ್ಟ್- ಜನ್ನಾಪುರ- ಆನೆಮಹಲ್-ಶಿರಾಡಿ-ಗುಂಡ್ಯ (ರಾ.ಹೆ. 75) ಮುಖಾಂತರ ಸಂಚರಿಸಬಹುದು.