21 ಶಿಫಾರಸುಗಳಲ್ಲಿ ಕೆಲವಷ್ಟೇ ಅನುಷ್ಠಾನ
Team Udayavani, Oct 24, 2018, 6:00 AM IST
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಉನ್ನತೀಕರಣಕ್ಕಾಗಿ ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ ನೀಡಿರುವ ವರದಿ ಬಹುತೇಕ ಹಳ್ಳ ಹಿಡಿದಿದೆ. ಸಮಿತಿಯ 21 ಶಿಫಾರಸುಗಳಲ್ಲಿ ಕೆಲವಷ್ಟೇ ಅನುಷ್ಠಾನಗೊಂಡಿದ್ದು, ಹಲವು ಅಂಶಗಳು
ಕಾರ್ಯರೂಪಕ್ಕೆ ಬರಲು ಬಾಕಿ ಇವೆ. ಹಿಂದಿನ ಕಾಂಗ್ರೆಸ್ ಸರ್ಕಾರ, ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಶಿಕ್ಷಣ ತಜ್ಞರಾದ ಪ್ರೊ.ಚಂದ್ರಶೇಖರ ದಾಮ್ಲೆ, ಪ.ಮಲ್ಲೇಶ್, ಗಂಗಾಧರ ಕುಷ್ಟಗಿ, ಬಾನು ಮುಷ್ತಾಕ್, ಡಾ.ಅಂಬ್ರೋಸ್ ಪಿಂಟೋ ಸದಸ್ಯರನ್ನೊಳಗೊಂಡ ಸಮಿತಿ ರಚಿಸಿತ್ತು. ಸಮಿತಿಯು
ರಾಜ್ಯಾದ್ಯಂತ ವಿವಿಧ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಅವಲೋಕಿಸಿ, 21 ಶಿಫಾರಸುಗಳೊಂದಿಗೆ 2017ರ ಸೆ.4ರಂದು ರಾಜ್ಯ ಸರ್ಕಾರಕ್ಕೆ ವರದಿ ಒಪ್ಪಿಸಿತ್ತು.
ಅಂದು ವರದಿಯ ಶಿಫಾರಸು ಸ್ವೀಕರಿಸಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ವರದಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಇನ್ನೊಂದು ಸಮಿತಿ ರಚನೆ ಮಾಡಲಾಗುತ್ತದೆ. ಆ ಸಮಿತಿ ನೀಡುವ ಸಲಹೆಯ ಆಧಾರದಲ್ಲಿ ಸಚಿವ ಸಂಪುಟದ ನಿರ್ಧಾರದೊಂದಿಗೆ ಅಗತ್ಯ ಶಿಫಾರಸು ಜಾರಿಗೆ ತರಲಾಗುತ್ತದೆ ಎಂಬ ಭರವಸೆ ನೀಡಿದ್ದರು. ಆದರೆ, ಕಾಂಗ್ರೆಸ್ ಸರ್ಕಾರದ ಅವಧಿ ಮುಗಿದರೂ ವರದಿಯ ಶಿಫಾರಸ್ಸನ್ನು ಸಮಗ್ರವಾಗಿ ಅನುಷ್ಠಾನ ಮಾಡುವ ಯಾವ ಕ್ರಮವೂ ನಡೆದಿಲ್ಲ. ಕನ್ನಡ ಅಭಿವೃದ್ಧಿ
ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಮೇಲಿಂದ ಮೇಲೆ ಸರ್ಕಾರಕ್ಕೆ ಈ ಸಂಬಂಧ ಪತ್ರ ಬರೆದಿದ್ದರೂ, ಪ್ರಯೋಜನವಾಗಿಲ್ಲ.
ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ನೀಡಿರುವ ವರದಿಯ ಅನುಷ್ಠಾನಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಿಗೂ ಸೋಮವಾರ ಪತ್ರ ಬರೆದಿದ್ದಾರೆ. ಸಮಿತಿಯ ಶಿಫಾರಸು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಸೂಕ್ತ ನಿರ್ಧಾರ
ತೆಗೆದುಕೊಳ್ಳುವಂತೆಯೂ ಕೋರಿಕೊಂಡಿದ್ದಾರೆ.
ಶಿಫಾರಸು ಅನುಷ್ಠಾನ ಸುಲಭವೇ?: ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಸಮಿತಿ 21 ಶಿಫಾರಸು ಮಾಡಿದೆ. ಸರ್ಕಾರಿ ಶಾಲೆಗಳ ತರಗತಿಗೆ ಕೊಠಡಿ ನಿರ್ಮಿಸಲು ಹಾಗೂ ಸುಸಜ್ಜಿತ ಕಟ್ಟಡ ಒದಗಿಸಲು 300 ಕೋಟಿಗಳಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ.
ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ನೇಮಕಾತಿಗೂ ಶಿಫಾರಸು ಮಾಡಿದ್ದು, 10 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆ ತೆರೆಯುವ ಕಾರ್ಯ ಪ್ರಸಕ್ತ ಸಾಲಿನಿಂದ ಆರಂಭವಾಗಿದೆ. ಶಿಕ್ಷಕರನ್ನು ಕಲಿಕೇತರ ಚಟುವಟಿಕೆಯಿಂದ ಮುಕ್ತಗೊಳಿಸಿಲ್ಲ. ತರಗತಿಗೊಬ್ಬ ಶಿಕ್ಷಕರು ಇಲ್ಲ, ಇ-ಗ್ರಂಥಾಲಯ, ಇ-ಬುಕ್ ತಂತ್ರಜ್ಞಾನ ಹಾಗೂ ತಾಂತ್ರಿಕ ವಿಧಾನ ಅಳವಡಿಕೆಯಾಗಿಲ್ಲ. ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಅಥವಾ ಅನುದಾನಿತ ಶಾಲೆಗೆ ಸೇರಿಸಬೇಕೆಂಬ ಶಿಫಾರಸು ಸರ್ಕಾರಕ್ಕೆ ನುಂಗಲಾದರ ತುತ್ತಾಗಿದೆ.
ಖಾಸಗಿ ಶಾಲೆಗಳಲ್ಲಿ ಹೆಚ್ಚುವರಿ ಶುಲ್ಕ ಸಂಗ್ರಹ
ಹಾಗೂ ಪಾಲಕರಿಗೆ ಪರೀಕ್ಷೆ ನಡೆಸುವುದಕ್ಕೆ ಕಡಿವಾಣ ಬಿದ್ದಿಲ್ಲ. ಆರ್ಟಿಇ ಶುಲ್ಕ ಸರ್ಕಾರದಿಂದ ಭರಿಸುವುದನ್ನು ನಿಲ್ಲಿಸಬೇಕು ಎಂಬ ಶಿಫಾರಸು ಅನುಷ್ಠಾನ ಸುಲಭದ ಮಾತಲ್ಲ. ಹೀಗೆ 21 ಶಿಫಾರಸುಗಳಲ್ಲಿ ಕೆಲವೊಂದು ಅನುಷ್ಠಾನವಾಗಿದ್ದು, ಇನ್ನು ಕೆಲವೊಂದು ಅನುಷ್ಠಾನಕ್ಕೆ ಬೇಕಾದ ಸಿದ್ಧಯೂ ನಡೆದಿಲ್ಲ.
ವರ್ಗಾವಣೆಗೆ ಸಾಫ್ಟ್ವೇರ್ ಸಮಸ್ಯೆ
ಬೆಂಗಳೂರು: ಸರ್ಕಾರಿ ಶಾಲೆಗಳ ಶಿಕ್ಷಕರ ವರ್ಗಾವಣೆಗೆ ಸಾಫ್ಟ್ವೇರ್ನ ತಾಂತ್ರಿಕ ಸಮಸ್ಯೆ ಅಡ್ಡಿಯಾಗುತ್ತಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ಹೆಚ್ಚುವರಿ ಶಿಕ್ಷಕರ ಸ್ಥಳ ನಿಯೋಜನೆಗೆ ಹಾಗೂ ಪ್ರೌಢಶಾಲಾ ಹೆಚ್ಚುವರಿ ಶಿಕ್ಷಕರ ಪಟ್ಟಿ ಪ್ರಕಟಿಸಲು ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ವರ್ಗಾವಣಾ ವೇಳಾಪಟ್ಟಿಯ ಪ್ರಕಾರ ಪ್ರಾಥಮಿಕ ಶಾಲೆಯ ಹೆಚ್ಚುವರಿ ಶಿಕ್ಷಕರ ಸ್ಥಳ ನಿಯೋಜನೆಯಾಗಬೇಕಿತ್ತು. ಆದರೆ, ಸಾಫ್ಟ್ವೇರ್ ಸಮಸ್ಯೆಯಿಂದಾಗಿ ಸ್ಥಳ ನಿಯೋಜನೆ ಪ್ರಕ್ರಿಯೆ ಕುಂಟುತ್ತಾ ಸಾಗುತ್ತಿದೆ. ಹಾಗೆಯೇ ಪ್ರೌಢಶಾಲಾ ಹೆಚ್ಚುವರಿ ಶಿಕ್ಷಕರ ಪಟ್ಟಿಯೇ ಇನ್ನೂ ಪ್ರಕಟವಾಗಿಲ್ಲ. ಸಾಫ್ಟ್ವೇರ್ನ ತಾಂತ್ರಿಕ ದೋಷದಿಂದ ವರ್ಗಾವಣೆಗೆ ಕಾದು ಕುಳಿತಿರುವ ಶಿಕ್ಷಕ ವರ್ಗ ಕಂಗಾಲಾಗಿದೆ.
ವರದಿಯ ಅನುಷ್ಠಾನಕ್ಕಾಗಿ ಮುಖ್ಯಮಂತ್ರಿಯವರನ್ನು ಅತಿ ಶೀಘ್ರದಲ್ಲಿ ಖುದ್ದು ಭೇಟಿ ಮಾಡಲಿದ್ದೇನೆ. ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸುವಂತೆ ಮನವಿ ಮಾಡಲಿದ್ದೇನೆ. ಸರ್ಕಾರಿ ಶಾಲೆಗಳ ಉಳಿವಿಗೆ ಸಮಿತಿಯ ವರದಿ ಅನುಷ್ಠಾನ ಅನಿವಾರ್ಯವಾಗಿದೆ.
● ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ
● ರಾಜು ಖಾರ್ವಿ ಕೊಡೇರಿ