ಸಿದ್ದರಾಮಯ್ಯ ಸಿಎಂ ಆಗಲು ನಮ್ಮ ಸಮುದಾಯದವರು ಕುರಿ ಮಾರಿದ್ದಾರೆ: ಎಚ್.ವಿಶ್ವನಾಥ್
Team Udayavani, Dec 4, 2020, 2:32 PM IST
ಮೈಸೂರು: ಸಿದ್ದರಾಮಯ್ಯ ಸಿಎಂ ಆಗಲು ಕುರುಬ ಸಮುದಾಯದವರು ತನು ಮನ ಧನ ಎಲ್ಲವನ್ನೂ ಅರ್ಪಿಸಿದ್ದಾರೆ. ಅಂತಹ ಸಮುದಾಯದ ಹೋರಾಟವನ್ನೇ ಇದೀಗ ಸಿದ್ದರಾಮಯ್ಯನವರು ಪ್ರಶ್ನಿಸಿದ್ದಾರೆ. ಮಾತ್ರವಲ್ಲದೆ ಹೋರಾಟವೇ ಬೇಡ ಎಂದಿರುವುದು ಎಷ್ಟು ಸರಿ ಎಂದು ಎಚ್. ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕುರುಬ ಸಮುದಾಯದ ಹೋರಾಟಕ್ಕೆ ಮಾರ್ಗದರ್ಶನ ಮಾಡಿದ್ದರೇ, ಈ ಹೋರಾಟ ಇನ್ನೂ ಎತ್ತರಕ್ಕೆ ಬೆಳೆಯುತ್ತಿತ್ತು. ಕನಕಗೋಪುರ ಬಿದ್ದಾಗ, ಮಠ ಕಟ್ಟಿದಾಗ ಕೂಡ ಅವರು ಇರಲಿಲ್ಲ. ಮಠ ಕಟ್ಟುವುದು ಅಷ್ಟು ಸುಲಭವಲ್ಲ. ಕಾಗಿನೆಲೆ ಮಹಾಸಂಸ್ಥಾಪಕ ಅಧ್ಯಕ್ಷ ನಾನೇ ಆಗಿದ್ದೇನೆ. ಆಗೆಲ್ಲ ನೀವು (ಸಿದ್ದರಾಮಯ್ಯ) ಬರದಿದ್ದರೂ ನಿಮ್ಮ ಹೆಸರು ಹಾಕಲಾಗಿತ್ತು. ಈ ಹೋರಾಟಕ್ಕೆ ಬೆಂಬಲ ಸೂಚಿಸಬೇಕಿತ್ತು ಎಂದು ಅವರು ತಿಳಿಸಿದ್ದಾರೆ.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಲು ನಮ್ಮ ಸಮುದಾಯದವರು ಕುರಿ ಮಾರಿದ್ದಾರೆ. ಅವರ ಪರ ಹೋರಾಟಕ್ಕೆ ಏಕೆ ಹಿಂದೇಟು ಹಾಕುತ್ತಿದ್ದೀರಾ ? ನಾವು ಯಾರನ್ನು ಟಾರ್ಗೆಟ್ ಮಾಡುತ್ತಿಲ್ಲ. ಸಿದ್ದರಾಮಯ್ಯ ಅವರನ್ನು ಸಮುದಾಯ ಎಂದೂ ಅಗೌರವವಾಗಿ ಕಂಡಿಲ್ಲ. ಅಂದು ಹೋರಾಟ ಮಾಡಿದ ಕಾರಣಕ್ಕೆ ಅವರಿಗೆ ಬಲ ಬಂದಿದೆ ಎಂದ ವಿಶ್ವನಾಥ್, ಕುರುಬ ಸಮುದಾಯವನ್ನು ಸರ್ವಾಂಗೀಣ ಬೆಳವಣಿಗೆಗೆ ಬಳಸಿಕೊಂಡಿದ್ದೀರಾ ಎಂದು ಸಿದ್ದರಾಮಯ್ಯನವರಲ್ಲಿ ಪ್ರಶ್ನಿಸಿದರು.
ಇದನ್ನೂ ಓದಿ:ರೈತ ವಿರೋಧಿ ಕಾಯ್ದೆ ವಾಪಸ್ಗೆ ಆಗ್ರಹ
ಸಿದ್ದರಾಮಯ್ಯನವರೇ ಮೊದಲು ಏಕವಚನದಲ್ಲಿ ಮಾತನಾಡುವುದು ಬಿಡಿ ಎಂದ ವಿಶ್ವನಾಥ್. ಎಲ್ಲರನ್ನೂ ಏಕವಚನದಲ್ಲಿ ಮಾತನಾಡಿಸಬೇಡಿ. ನಾನು ನಿಮಗಿಂತ ರಾಜಕೀಯದಲ್ಲಿ ಹಿರಿಯ. ನನ್ನ ಸಲಹೆ ಸ್ವೀಕರಿಸಿ. ಮುಂದೆಯಾದರೂ ಎಲ್ಲರನ್ನು ಬಹುವಚನದಲ್ಲಿ ಮಾತನಾಡಿಸಿ. ದೇವಾರಾಜ್ ಅರಸ್ ಅವರಂತೆ ಎಲ್ಲರನ್ನು ಗೌರವಿಸುವುದನ್ನು ಕಲಿಯಿರಿ ಎಂದು ಮನವಿ ಮಾಡಿದರು.
ಉಪಚುನಾವಣೆ ಸಮಯದಲ್ಲಿ ಯೋಗೇಶ್ವರ್ ಹಾಗೂ ಸಂತೋಷ್, ಸಿಎಂ ಯಡಿಯೂರಪ್ಪ ಕೊಟ್ಟ ಹಣ ಎತ್ತಿಕೊಂಡು ಹೋದರು ಎಂಬ ಎಂ.ಎಲ್.ಸಿ ಎಚ್ ವಿಶ್ವನಾಥ್ ಹೇಳಿಕೆ ವಿಚಾರವಾಗಿ ಮಾತನಾಡಿ, ಹೌದು ! ನಾನು ಹೇಳಿದ್ದು ಸತ್ಯ. ನಾನು ಹೇಳಿದ ದೊಡ್ಡ ಮೊತ್ತ 5 ಲಕ್ಷ ರೂ. ಗಳು. ಆ ಹಣ ಎತ್ತಿಕೊಂಡು ಹೋದರು ಎಂದು ಆರೋಪಿಸಿದ್ದೆ. ನನಗೆ ಅದೇ ದೊಡ್ಡ ಮೊತ್ತ. ಸಿಎಂ ಆಗಿದ್ದ ನಿಮಗೆ ( ಸಿದ್ದರಾಮಯ್ಯ) ಕೋಟಿ ಕೋಟಿ ಇರಬಹುದು ಎಂದು ವ್ಯಂಗ್ಯವಾಡಿದರು.
ಜಿ.ಟಿ. ದೇವೇಗೌಡ ಹಣ ಪಡೆದು ಬಿಜೆಪಿಗೆ ಕೆಲಸ ಮಾಡಿದ್ದರೇ, ಅದು ಎಷ್ಟು ಹಣ ಎಂದು ತಿಳಿಸಿ. ಅದು ವೈಟೋ, ಬ್ಲಾಕೋ ಎಂಬುದನ್ನು ಮೊದಲು ಸ್ಪಷ್ಟಪಡಿಸಿ ಎಂದು ಸಿದ್ದರಾಮಯ್ಯಗೆ ಹೆಚ್. ವಿಶ್ವನಾಥ್ ತಿರುಗೇಟು ನೀಡಿದರು.