ಡಿಸಿಎಂ ಆಗಬೇಕೆಂಬುದು ಜನರ ಬಯಕೆ: ಶ್ರೀರಾಮುಲು
Team Udayavani, Jan 29, 2020, 3:05 AM IST
ಕೋಲಾರ: “ನಾನು ಡಿಸಿಎಂ ಆಗಬೇಕು ಎಂದು ಜನ ಬಯಸಿದ್ದಾರೆ. ಈ ಬಗ್ಗೆ ಪಕ್ಷದ ನಿರ್ಧಾರಕ್ಕೆ ಬದ್ದ’ ಎಂದು ಆರೋಗ್ಯ ಸಚಿವ ಶ್ರೀರಾಮುಲು ಪುನರುಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಉಪ ಚುನಾವಣೆಯಲ್ಲಿ ಗೆದ್ದವರೆಲ್ಲರೂ ಸಚಿವರಾಗಬೇಕು ಎಂದು ಬಯಸಿದ್ದಾರೆ. ಸಿಎಂ ಯಡಿಯೂರಪ್ಪ ಸಹ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ.
ಸಂಪುಟ ವಿಸ್ತರಣೆ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ್ಯ ಜೆಪಿ ನಡ್ಡಾ, ಅಮಿತ್ ಶಾ ಜೊತೆ ಮಾತುಕತೆ ನಡೆಸಬೇಕಿದೆ. ದೆಹಲಿ ಚುನಾವಣೆ ನಂತರ ಅಥವಾ ಅದಕ್ಕೂ ಮುಂಚೆಯೇ ವಿಸ್ತರಣೆ ಆಗಬಹುದು. ಈಗಾಗಲೇ ಕೆಲವರಿಗೆ ಮಂತ್ರಿ ಸ್ಥಾನ, ಕೆಲವರಿಗೆ ನಿಗಮ-ಮಂಡಳಿ ಸ್ಥಾನ ಕೊಡಬೇಕೆಂದು ಪಕ್ಷ ತೀರ್ಮಾನಿಸಿದೆ. ಸೋತವರ ವಿಚಾರದಲ್ಲಿ ಪಕ್ಷವೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
ರೈತ ಹೆಣ್ಣು ಮಗಳು ಕಬ್ಬಿಗೆ ಬೆಂಬಲ ಬೆಲೆ ಕೇಳಿದಾಗ ಎಲ್ಲಿ ಮಲಗಿದ್ದೀರಿ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದರು. ಕೊಪ್ಪಳದಲ್ಲಿ ರೈತರು ಹೋರಾಟ ಮಾಡಿದಾಗ ನೀವು ನನಗೆ ಮತ ನೀಡಿಲ್ಲ ಎಂದು ದೂರಿದ್ದರು. ಸೈನಿಕರ ವಿಚಾರದಲ್ಲೂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದರು. ಈಗ ಮಿಣಿ ಮಿಣಿ ಪೌಡರ್ ಎಂದು ಮಂಗಳೂರು ಬಾಂಬ್ ಪ್ರಕರಣದಲ್ಲಿ ಹೇಳಿದ್ದಾರೆ. ಅವರಿಗೆ ಗಂಭೀರತೆಯೇ ಇಲ್ಲ.
-ಶ್ರೀರಾಮುಲು, ಆರೋಗ್ಯ ಸಚಿವ