ಶಾಸಕ ಪಿಳ್ಳಮುನಿಸ್ವಾಮಪ್ಪ ಯೂಟರ್ನ್: ರಾಜೀನಾಮೆ ವಾಪಾಸ್
Team Udayavani, Feb 24, 2017, 10:44 AM IST
ಬೆಂಗಳೂರು : ಜೆಡಿಎಸ್ ನಾಯಕತ್ವದ ವಿರುದ್ಧವೇ ಬಂಡೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ದೇವನಹಳ್ಳಿ ಶಾಸಕ ಪಿಳ್ಳಮುನಿಸ್ವಾಮಪ್ಪ ಯೂಟರ್ನ್ ಹೊಡೆದಿದ್ದು ರಾಜೀನಾಮೆಯನ್ನು ಶುಕ್ರವಾರ ವಾಪಾಸ್ ಪಡೆದಿದ್ದಾರೆ.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ನಡೆಸಿದ ಸಂಧಾನದ ಬಳಿಕ ಸ್ಪೀಕರ್ ಕೋಳಿವಾಡ ಅವರ ನಿವಾಸಕ್ಕೆ ತೆರಳಿದ ಮುನಿಸ್ವಾಮಪ್ಪ ರಾಜೀನಾಮೆ ವಾಪಾಸ್ ಪಡೆದಿದ್ದಾರೆ.
ಗುರುವಾರ ಬೆಳಗ್ಗೆ ಸ್ಪೀಕರ್ ಕೋಳಿವಾಡ್ ನಿವಾಸಕ್ಕೆ ಭೇಟಿ ನೀಡಿ ರಾಜೀನಾಮೆ ಪತ್ರ ಸಲ್ಲಿಸಿದ್ದು, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿ ಪತ್ರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯವರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದರು.
ದೇವನಹಳ್ಳಿ ಕ್ಷೇತ್ರದ ಸ್ಥಳೀಯ ಮುಖಂಡ ನಿಸರ್ಗ ನಾರಾಯಣಸ್ವಾಮಿ ಅವರನ್ನು ಜೆಡಿಎಸ್ಗೆ ಸೇರ್ಪಡೆ ಮಾಡಿಕೊಂಡಿರುವುದು ಹಾಗೂ ಅವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡುವ ಒಪ್ಪಂದ ಆಗಿರುವುದು ಪಿಳ್ಳಮುನಿಸ್ವಾಮಪ್ಪ ಅವರ ಅಸಮಾಧಾನಕ್ಕೆ ಕಾರಣ ಎಂದು ತಿಳಿದು ಬಂದಿದೆ.
3 ನೇ ವ್ಯಕ್ತಿ ಪಕ್ಷಕ್ಕೆ ಸೇರಿಸಿಕೊಂಡಿದ್ದಕ್ಕೆ ಅಸಮಧಾನ ಹಿಂದಿನಿಂದಲೂ ನಾನು ಜೆಡಿಎಸ್ಗಾಗಿ ದುಡಿದದಿದ್ದು ನನ್ನ ಮಾತಿಗೆ ಬೆಲೆ ಇಲ್ಲದಾಗ ಬೇಸರವಾಗಿತ್ತು. ನಾನು ಕ್ಷೇತ್ರದ ಜನರಿಂದ ನೇರವಾಗ ಆಯ್ಕೆಯಾಗಿದ್ದು 5 ವರ್ಷ ಕ್ಷೇತ್ರದಲ್ಲಿ ಕೆಲಸ ಐಮಾಡಬೇಕಾಗಿದೆ. ವರಿಷ್ಠರು ಎಲ್ಲವನ್ನೂ ಸರಿ ಮಾಡಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.