ರಾಜೀನಾಮೆ ಅಂಗೀಕರಿಸಿದರೆ ರಾಜಕೀಯ ನಿವೃತ್ತಿ: ಎಂಟಿಬಿ
Team Udayavani, Jul 13, 2019, 3:00 AM IST
ಹೊಸಕೋಟೆ: ಶಾಸಕ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆ ಅಂಗೀಕಾರವಾದಲ್ಲಿ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ಅಭಿವೃದ್ಧಿ ಮಾಡಲು ಸಾಧ್ಯವಾಗದಂತಹ ಅಧಿಕಾರ ಏಕೆ ಬೇಕು?. 70 ಶಾಸಕರಿರುವ ಕಾಂಗ್ರೆಸ್ನವರೇ ಮುಖ್ಯಮಂತ್ರಿಯಾಗಬೇಕಿತ್ತು ಎಂದು ಹಿಂದೆಯೇ ಸಿದ್ದರಾಮಯ್ಯನವರಿಗೂ ತಿಳಿಸಲಾಗಿತ್ತು.
ಜೆಡಿಎಸ್ ಈಗಾಗಲೇ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿರುವ ಪರಿಸ್ಥಿತಿಯಲ್ಲಿ ಸರಕಾರದೊಂದಿಗೆ ಮುಂದುವರಿಯುವುದು ಸೂಕ್ತವಲ್ಲ. ಅಭಿವೃದ್ಧಿ ವಿಚಾರದಲ್ಲಿ ಬಹಳಷ್ಟು ತಾರತಮ್ಯ ಮಾಡಿರುವ ಕಾರಣದಿಂದ ಬೇಸತ್ತು ರಾಜೀನಾಮೆ ಸಲ್ಲಿಸಿದ್ದೇನೆ. ರಾಜೀನಾಮೆ ಸಂಬಂಧವಾಗಿ ಸ್ಪೀಕರ್ ಜು.17ರಂದು ತಿಳಿಸಿರುವಂತೆ ವಿಚಾರಣೆಗೆ ಹಾಜರಾಗುತ್ತೇನೆ. ನಂತರ, ತಾಲೂಕಿನ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆಂದು ತಿಳಿಸಿದರು.