ಕೇಂದ್ರದಿಂದ ಯೋಧರ ರಾಜಕೀಯ ಬಳಕೆ
Team Udayavani, Mar 1, 2019, 1:03 AM IST
ಬೆಂಗಳೂರು: “ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಧರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದು, ಯಡಿಯೂರಪ್ಪ ಅವರ ಹೇಳಿಕೆ ಯಿಂದ ನಿಜಬಣ್ಣ ಬಯಲಾಗಿದೆ. ಇದು ನಾಚಿಕೆಗೇಡಿನ ಸಂಗತಿ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪುಲ್ವಾಮ ಘಟನೆ ಬಳಿಕ ಪಾಕಿಸ್ತಾನ ವಿರುದಟಛಿ ಭಾರತ ಕೈಗೊಂಡ ಪ್ರತಿದಾಳಿ ಬಳಿಕ ಬಿಜೆಪಿ ರಾಜ್ಯದಲ್ಲಿ 22 ಸ್ಥಾನ ಗಳಿಸಿಕೊಳ್ಳಲಿದೆ ಎಂಬ ಯಡಿಯೂರಪ್ಪ ಹೇಳಿಕೆಯಿಂದ ಬಿಜೆಪಿಯವರ ಬಣ್ಣ ಬಯಲಾಗಿದೆ. ಕೇವಲ ಯಡಿಯೂರಪ್ಪ ಮಾತ್ರವಲ್ಲದೆ ಕೇಂದ್ರದಲ್ಲಿರುವ ನಾಯಕರೂ ಯೋಧರ ಜೀವದ ಜತೆ ಚೆಲ್ಲಾಟ ಆಡುತ್ತಿದ್ದಾರೆ. ಅಮಾಯಕ ಯೋಧರನ್ನು ದುರುಪಯೋಗ ಮಾಡಿಕೊಳ್ಳುವ ಮೂಲಕ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ತಮ್ಮ ಪಕ್ಷದ ಏಳಿಗೆಗಾಗಿ ಅನೇಕ ಯೋಧರ ಕುಟುಂಬಗಳನ್ನು ಅನಾಥರನ್ನಾಗಿಸುವುದು, ಯೋಧರ ಪತ್ನಿಯರನ್ನು ವಿಧವೆಯರನ್ನಾಗಿಸುವ ಕೀಳುಮಟ್ಟದ ರಾಜಕೀಯ ಬಿಜೆಪಿಯಿಂದ ನಡೆಯುತ್ತಿದೆ ಎನ್ನುವುದು ಯಡಿಯೂರಪ್ಪ ಹೇಳಿಕೆಯಿಂದ ಬಯಲಾಗಿದೆ ಎಂದರು.
ದೇಶದ ಯೋಧರು ತಮ್ಮ ಪ್ರಾಣ ಪಣವಾಗಿಟ್ಟು ಪಾಕಿಸ್ತಾನಕ್ಕೆ ಹೋಗಿ ಬಾಂಬ್ ಹಾಕಿದರೆ, ಇಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ತಾವೇ ಹಾಕಿದ್ದೇವೆ ಎನ್ನುವ ರೀತಿಯ ನಡವಳಿಕೆ ಖಂಡನೀಯ ಎಂದರು.