ಆದ್ಯತೆ ಮೇರೆಗೆ ಸೂರು: ಸೋಮಣ್ಣ
Team Udayavani, Mar 12, 2020, 3:04 AM IST
ವಿಧಾನ ಪರಿಷತ್ತು: ವಿಶೇಷ ಚೇತನರು, ಎಚ್ಐವಿ ಸೋಂಕಿತರು, ದೇವದಾಸಿಗಳು, ತೃತೀಯ ಲಿಂಗಿಗಳು, ಅಲೆಮಾರಿಗಳಿಗೆ ವಸತಿ ನಿರ್ಮಾಣಕ್ಕೆ ದೇವರಾಜ ಅರಸು ವಸತಿ ಯೋಜನೆಯಲ್ಲಿ ಅನುದಾನ ಬಿಡುಗಡೆಗೆ ಜಿಲ್ಲಾವಾರು ಸಮಿತಿ ರಚನೆ ಮಾಡಲಾಗಿದೆ ಮತ್ತು ಈ ಸಂಬಂಧ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಲಾಗುತ್ತದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಜೆಡಿಎಸ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಉತ್ತರಿಸಿ, ವಿಶೇಷ ವರ್ಗದ ಜನರಿಗೆ ಯಾವುದೇ ರೀತಿಯ ಸೌಲಭ್ಯ ಒದಗಿಸದೆ, ಆತ್ಮವಂಚನೆ ಮಾಡಲ್ಲ. ಆದ್ಯತೆ ಮೇರೆಗೆ ತುರ್ತು ಹಣ ಬಿಡುಗಡೆ ಮಾಡು ವಂತೆ ಈಗಾಗಲೇ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ರಾಜ್ಯದಲ್ಲಿ 5 ವರ್ಷಗಳಲ್ಲಿ ಒಟ್ಟು 68,115 ಫಲಾ ನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಈ ಪೈಕಿ 41,207 ಮನೆಗಳು ಪೂರ್ಣಗೊಂಡಿವೆ. 6020 ಮನೆಗಳು ತಳಪಾಯ ಹಂತದಲ್ಲಿ 3744 ಮನೆಗಳು ಗೋಡೆ ಹಂತದಲ್ಲಿ, 4206 ಮನೆಗಳು ಛಾವಣಿ ಹಂತದಲ್ಲಿವೆ. ಉಳಿದಂತೆ 1975 ಫಲಾನುಭವಿಗಳಿಗೆ ಸಾಕಷ್ಟು ಕಾಲಾವಕಾಶ ನೀಡಲಾ ಗಿತ್ತು. ಆದರೆ, ಮನೆಗಳ ನಿರ್ಮಾಣ ಪ್ರಾರಂಭಿಸದ ಹಿನ್ನೆಲೆಯಲ್ಲಿ ಹಿಂಪಡೆಯಲಾಗಿದೆ ಎಂದರು.