ಶುಲ್ಕ: ಪಾಲಕರು, ಆಡಳಿತ ಮಂಡಳಿ ವಾಗ್ವಾದ
Team Udayavani, Jan 16, 2021, 12:58 AM IST
ಬೆಂಗಳೂರು: ಖಾಸಗಿ ಶಾಲೆಗಳ ಶುಲ್ಕ ವಿಚಾರದಲ್ಲಿ ಆಡಳಿತ ಮಂಡಳಿಯ ಪ್ರತಿನಿಧಿಗಳು ಮತ್ತು ಪಾಲಕ, ಪೋಷಕರ ನಡುವೆ ವಾಗ್ವಾದ ನಡೆದಿದೆ.
ಶುಲ್ಕ ವಿಚಾರವಾಗಿ ಪಾಲಕ, ಪೋಷಕರು ಮತ್ತು ಆಡಳಿತ ಮಂಡಳಿಯ ಪ್ರತಿನಿಧಿಗಳೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿ.ಅನುºಕುಮಾರ್ ಅವರು ಶುಕ್ರವಾರ ಸಮಗ್ರ ಶಿಕ್ಷಣ ಕಚೇರಿಯಲ್ಲಿ ಸಭೆ ನಡೆಸಿದ್ದರು. ಸಭೆಯಲ್ಲಿ ಶೇ.50ರಷ್ಟು ಶುಲ್ಕ ವಿನಾಯತಿ ನೀಡಬೇಕು ಎಂದು ಪಾಲಕ, ಪೋಷಕರು ಆಗ್ರಹಿಸಿದರು.
ಇದಕ್ಕೆ ಪ್ರತಿಯಾಗಿ ಆಡಳಿತ ಮಂಡಳಿಯ ಪ್ರತಿನಿಧಿಗಳು ಶೇ.50 ರಷ್ಟು ಶುಲ್ಕ ವಿನಾಯತಿ ಸಾಧ್ಯವೇ ಇಲ್ಲ. ಕಳೆದ ವರ್ಷದಷ್ಟೇ ಶುಲ್ಕವನ್ನು ಕಂತುಗಳ ರೂಪದಲ್ಲಿ ಪಾವತಿಸಲು ಅವಕಾಶ ನೀಡಿದ್ದೇವೆ. ಇಷ್ಟಾದರೂ ಅನೇಕರು ಮಕ್ಕಳ ದಾಖಲಾತಿ ಮಾಡಿಲ್ಲ. ಇದರಿಂದ ಸಿಬಂದಿಗೆ ವೇತನ ನೀಡುವುದು ಕಷ್ಟವಾಗಿದೆ. ಆದ್ದರಿಂದ ಶುಲ್ಕ ಪಾವತಿ ಸಂಬಂಧ ಸರಕಾರ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದರು.
ಸಭೆಯ ಬಳಿಕ ಹೊರಬರುತ್ತಿದ್ದಂತೆ ಪಾಲಕ, ಪೋಷಕರ ಸಂಘಟನೆಯ ಪ್ರತಿನಿಧಿಗಳು ಹಾಗೂ ಆಡಳಿತ ಮಂಡಳಿಯ ಪ್ರತಿನಿಧಿಗಳು ಕೈ-ಕೈ ಮಿಲಾಯಿಸಿಕೊಳ್ಳುವ ಮಟ್ಟಕ್ಕೂ ಹೋಗಿದ್ದರು. ಅಲ್ಲಿದ್ದ ಅಧಿಕಾರಿಗಳು ಅವರನ್ನು ಸಮಾಧಾನಪಡಿಸಿದರು.
ಪಾಲಕರು, ಪೋಷಕರ ಸಂಘ ಟನೆಗಳ ಒಕ್ಕೂಟದ ಪ್ರತಿನಿಧಿಗಳು, ಖಾಸಗಿ ಶಾಲಾಡಳಿತ ಮಂಡಳಿಗಳಾದ ಕ್ಯಾಮ್ಸ್, ಕುಸ್ಮಾ, ರುಪ್ಸಾ, ಸಿಬಿಎಸ್ಇ, ಐಸಿಎಸ್ಇ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿದ್ದರು.
ಶುಲ್ಕದ ವಿಚಾರವಾಗಿ ಪಾಲಕ, ಪೋಷಕರು ಹಾಗೂ ಖಾಸಗಿ ಆಡಳಿತ ಮಂಡಳಿಗಳ ಸಭೆ ನಡೆಸಿದ್ದೇವೆ. ಸಭೆಯ ವರದಿಯನ್ನು ಇಲಾಖಾ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರಿಗೆ ಸಲ್ಲಿಸುತ್ತೇವೆ. ಆ ಬಳಿಕ ಶಿಕ್ಷಣ ಸಚಿವರು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.-ವಿ.ಅನ್ಬುಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ
ಸಭೆಯಲ್ಲಿ ಬಂದಿರುವ ಅಭಿಪ್ರಾಯ ಆಧರಿಸಿ ಆಯುಕ್ತರು ವರದಿಯನ್ನು ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಸಲ್ಲಿಸಲಿದ್ದಾರೆ. ಅನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಈ ಸಭೆ ಎರಡು ಕಡೆಯ ಪರಿಸ್ಥಿತಿ ಅವಲೋಕಿಸಿ ಒಂದು ಸೂತ್ರವನ್ನು ನಿರ್ಧರಿಸಲು ದಾರಿ ಮಾಡಿಕೊಟ್ಟಿದೆ.-ಸುರೇಶ್ ಕುಮಾರ್, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ