ಬಡ್ತಿ ಮೀಸಲಾತಿ: ಅನ್ಯಾಯಕ್ಕೆ ಒಳಗಾದವರ ಆಕ್ರೋಶ
Team Udayavani, Aug 8, 2017, 10:30 AM IST
ಬೆಂಗಳೂರು: ಬಡ್ತಿ ಮೀಸಲಾತಿ ಮುಂದುವರಿಸಲು ರಾಜ್ಯ ಸರ್ಕಾರದ ಸುಗ್ರೀವಾಜ್ಞೆ ತೀರ್ಮಾನ ಅನ್ಯಾಯ ಕ್ಕೊಳಗಾದವರ ಆಕ್ರೋಶಕ್ಕೆ ಕಾರಣವಾಗಿದೆ. 1978ರಿಂದ ಬಡ್ತಿ ಮೀಸಲಾತಿ ಜಾರಿಯಿಂದ ಇತರೆ ವರ್ಗಗಳ ಸುಮಾರು 20 ಸಾವಿರ ಅಧಿಕಾರಿಗಳಿಗೆ ಅನ್ಯಾಯವಾಗಿದೆ.
ಕೆಲವರು ಬಡ್ತಿಯಿಂದ ವಂಚಿತರಾಗಿ ನಿವೃತ್ತಿಯಾಗಿದ್ದರೆ, ಮತ್ತೆ ಕೆಲವರು ಬಡ್ತಿ ಪಡೆದು ನಿವೃತ್ತಿಯಾಗಿದ್ದಾರೆ. ಈಗಲಾದರೂ ಅನ್ಯಾಯ ಸರಿಪಡಿಸಲು ಹಿಂಬಡ್ತಿ ನೀಡಿದ್ದರೆ 15 ಸಾವಿರಕ್ಕೂ ಹೆಚ್ಚು ಮಂದಿಗೆ ನ್ಯಾಯ ದೊರಕುತ್ತಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.
ಪರಿಶಿಷ್ಟ ಜಾತಿ ಮತ್ತು ಪಂಗಡ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಏನೋ ಉಪಕಾರ ಮಾಡಿದಂತೆ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಿದೆ. ಇದರಿಂದ ಯಾವುದೇ ಪ್ರಯೋಜನವಾಗದು. ಸಂಸತ್ತಿನಲ್ಲಿ ತಿದ್ದುಪಡಿಯಾಗ ಬೇಕೆಂದು ನಿವೃತ್ತ ಅಧಿಕಾರಿಗಳು ಹೇಳುತ್ತಾರೆ. ಲೋಕೋಪಯೋಗಿ, ಇಂಧನ ಹಾಗೂ ನೀರಾವರಿ ಇಲಾಖೆಯಲ್ಲಿ ಎಂಜಿನಿಯರ್, ಸಹಾಯಕ ಎಂಜಿನಿಯರ್, ಕಾರ್ಯ ನಿರ್ವಾಹಕ ಎಂಜಿನಿಯರ್, ಮುಖ್ಯ ಎಂಜಿನಿಯರ್
ಹಂತದವರು, ಕಂದಾಯ ಇಲಾಖೆಯಲ್ಲಿ ತಹಸೀಲ್ದಾರ್, ಉಪ ವಿಭಾಗಾಧಿಕಾರಿ ಹಂತದವರು, ಇತರೆ ಇಲಾಖೆಗಳಲ್ಲಿ ನಿರ್ದೇಶಕ, ಉಪ ನಿರ್ದೇಶಕ ಹಂತದ ಅಧಿಕಾರಿಗಳು ಬಡ್ತಿ ಮೀಸಲಾತಿಯಿಂದ ಅನ್ಯಾಯಕ್ಕೊಳಗಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.