ಕುಖ್ಯಾತ ರೇಪಿಸ್ಟ್,ಕೈದಿ ಸೈಕೋ ಶಂಕರ್ ಜೈಲಲ್ಲೇ ಆತ್ಮಹತ್ಯೆ!
Team Udayavani, Feb 27, 2018, 9:14 AM IST
ಬೆಂಗಳೂರು:ಕುಖ್ಯಾತ ಅತ್ಯಾಚಾರ ಆರೋಪಿ, ಸೈಕೋ ಜಯಶಂಕರ್ ಸೋಮವಾರ ತಡರಾತ್ರಿ ಪರಪ್ಪನ ಅಗ್ರಹಾರ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜೈಲಿನ ವಿಶೇಷ ಭದ್ರತಾ ಕೊಠಡಿಯಲ್ಲಿದ್ದ ಶಂಕರ್ ಬ್ಲೇಡ್ನಿಂದ ಕತ್ತು ಕೊಯ್ದುಕೊಂಡು ಸಾವಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಕತ್ತು ಕೊಯ್ದುಕೊಂಡು ನರಳಾಡುತ್ತಿದ್ದ ಶಂಕರ್ನನ್ನು ಜೈಲು ಭದ್ರತಾ ಸಿಬಂದಿಗಳು ಗಮನಿಸಿ ಜೈಲಿನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಯತ್ನಿಸಿದ್ದು ಫಲಕಾಣದಾದಾಗ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅದಾಗಲೆ ಶಂಕರ್ ಕೊನೆಯುಸಿರೆಳೆದಿದ್ದ ಎಂದು ವರದಿಯಾಗಿದೆ.
ತಮಿಳುನಾಡಿನ ಸೇಲಂ ಜಿಲ್ಲೆಯ ಈಡಪ್ಪಾಡಿ ಮೂಲದ ಶಂಕರ್ ವಿಕೃತ ಕಾಮಿಯಾಗಿದ್ದು 19ಕ್ಕೂ ಹೆಚ್ಚು ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಈತನ ಮೇಲೆ ದಾಖಲಾಗಿವೆ. ಸೇಲಂನಲ್ಲಿ ಪೊಲೀಸ್ ಪೇದೆಯೊಬ್ಬರ ಪತ್ನಿಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಪತಿ ಪೇದೆಯನ್ನು ಪತ್ನಿಯ ಎದುರೇ ಬರ್ಬರವಾಗಿ ಹತ್ಯೆಗೈದಿದ್ದ.
2013 ರಲ್ಲಿ ಜೈಲಿನಿಂದ ತಪ್ಪಿಸಿಕೊಂಡು ಪೊಲೀಸರ ನಿದ್ದೆಗೆಡಿಸಿದ್ದ ಶಂಕರ್ ಭಾರೀ ಹುಡುಕಾಟದ ಬಳಿಕ 6 ದಿನಗಳು ಕಳೆದು ಮತ್ತೆ ಬಲೆಗೆ ಬಿದ್ದಿದ್ದ.