ಶೀರೂರು ಶ್ರೀ ಅಂತಿಮ ದರ್ಶನಕ್ಕೆ ಜನಸಾಗರ; ಮೂಲ ಮಠದಲ್ಲಿ ವೃಂದಾವನ
Team Udayavani, Jul 19, 2018, 6:31 PM IST
ಉಡುಪಿ: ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಯ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅಪಾರ ಜನಸಾಗರವೇ ಹರಿದು ಬಂದಿತ್ತು. ಇದೀಗ ಕೃಷ್ಣಮಠದಿಂದ ಪುಷ್ಪಾಲಂಕೃತ ಬುಟ್ಟಿಯಲ್ಲಿ ಶೀರೂರು ಶ್ರೀಗಳ ಪಾರ್ಥಿವ ಶರೀರ ಇಟ್ಟು ಮೆರವಣಿಗೆ ಮೂಲಕ ಮೂಲ ಶೀರೂರು ಮಠಕ್ಕೆ ಕೊಂಡೊಯ್ಯಲಾಗುತ್ತಿದೆ.
ಇದನ್ನೂ ಓದಿ: ಶೀರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಪಾದರು ವಿಧಿವಶ
ಉಡುಪಿಯಿಂದ 21 ಕಿಲೋ ಮೀಟರ್ ದೂರದಲ್ಲಿರುವ ಶೀರೂರು ಮೂಲ ಮಠದತ್ತ ಮೆರವಣಿಗೆ ಮೂಲಕ ಪಾರ್ಥಿವ ಶರೀರ ಕೊಂಡೊಯ್ಯುತ್ತಿದ್ದಾರೆ. ಉಡುಪಿಯ ಕೃಷ್ಣ ಮಠದಲ್ಲಿ ಪೂಜೆ ಬಳಿಕ ಪಾರ್ಥಿವ ಶರೀರ ರವಾನೆ. ಹಿರಿಯಡ್ಕದಲ್ಲಿರುವ ಮೂಲ ಮಠದ ಸ್ವರ್ಣಾ ನದಿ ತಟದಲ್ಲಿ ಅಂತಿಮ ಕ್ರಿಯೆ ನೆರವೇರಲಿದೆ.
ಶೀರೂರು ಮೂಲ ಮಠದ ಆವರಣದಲ್ಲಿಯೇ ಶಾಸ್ತ್ರೋಕ್ತವಾಗಿ ಶೀರೂರು ಶ್ರೀಗಳ ಪಾರ್ಥಿವ ಶರೀರಕ್ಕೆ ಅಂತಿಮ ವಿಧಿ ವಿಧಾನ ನೆರವೇರಿಸುವ ಮೂಲಕ ವೃಂದಾವನಸ್ಥರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಷ್ಟಮಠಗಳ ಪೈಕಿ ಪಲಿಮಾರು ಶ್ರೀಗಳು ಮಾತ್ರ ಶೀರೂರು ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ಉಳಿದ ಶ್ರೀಗಳು ಯಾರೂ ಅಂತಿಮ ದರ್ಶನ ಪಡೆದಿಲ್ಲ.
ಶೀರೂರು ಮೂಲ ಮಠದಲ್ಲಿ ಬಿಗಿ ಪೊಲೀಸ್ ಭದ್ರತೆ:
ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಶೀರೂರು ಮೂಲ ಮಠದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಲ್ಲದೇ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಹಲವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶೀರೂರು ಮಠ ಪೊಲೀಸರ ವಶಕ್ಕೆ:
ಮೂರು ದಿನಗಳ ಕಾಲ ಶೀರೂರು ಮಠ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದ್ದು, ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಪೊಲೀಸರು ಶೀರೂರು ಮೂಲ ಮಠದಲ್ಲಿ ಪರಿಶೀಲನೆ, ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.