ರಾಹುಲ್ ಸುಳ್ಳು ಬಯಲು ಮಾಡಲು ದೇಶಾದ್ಯಂತ BJPಯಿಂದ 70 ಸುದ್ದಿಗೋಷ್ಠಿ
Team Udayavani, Dec 17, 2018, 2:56 PM IST
ಬೆಂಗಳೂರು: ರಫೇಲ್ ಯುದ್ಧ ವಿಮಾನ ಖರೀದಿ ವಿಮಾನದ ವಿಚಾರದಲ್ಲಿ ರಾಹುಲ್ ಗಾಂಧಿ ಹೇಳಿರುವ ಸುಳ್ಳಿನ ಮುಖವಾಡ ಬಯಲು ಮಾಡುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷ ಸೋಮವಾರ ದೇಶಾದ್ಯಂತ 70 ಪತ್ರಿಕಾಗೋಷ್ಠಿ ನಡೆಸಿದೆ.
ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಸಿಖ್ ಗಲಭೆಗೆ ಸಂಬಂಧಿಸಿದಂತೆ ತಮ್ಮ ಕಾಂಗ್ರೆಸ್ ಪಕ್ಷ ಯಾವ ತಪ್ಪೂ ಮಾಡಿಲ್ಲ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದರು. ಆದರೆ ಸಿಖ್ ಗಲಭೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಹೀಗೆ ಪ್ರತಿಯೊಂದು ವಿಚಾರದಲ್ಲೂ ಸುಳ್ಳು ಹೇಳುತ್ತಿರುವ ರಾಹುಲ್ ಗಾಂಧಿ ಬಣ್ಣ ಕೋರ್ಟ್ ತೀರ್ಪಿನಿಂದಲೇ ಬಯಲಾಗುತ್ತಿದೆ ಎಂದರು.
ರಫೇಲ್ ವಿಚಾರದಲ್ಲೂ ರಾಹುಲ್ ಗಾಂಧಿ ಸುಳ್ಳನ್ನು ಹೇಳಿದ್ದಾರೆ. ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ರಫೇಲ್ ಪ್ರಕರಣದಲ್ಲಿ ತೀರ್ಪು ನೀಡಿದ್ದರೂ ಕೂಡಾ ರಾಹುಲ್ ರಾಜಕೀಯ ಮಾಡಲು ಹೊರಟಿದ್ದಾರೆ. ಈ ನಿಟ್ಟಿನಲ್ಲಿ ರಾಹುಲ್ ಸುಳ್ಳನ್ನು ಬಯಲು ಮಾಡುವ ನಿಟ್ಟಿನಲ್ಲಿ ಇಂದು ದೇಶದ ವಿವಿಧ ಸ್ಥಳಗಳಲ್ಲಿ 70 ಸುದ್ದಿಗೋಷ್ಠಿ ನಡೆಸುತ್ತಿರುವುದಾಗಿ ಹೇಳಿದರು.
ಸಿಖ್ ಗಲಭೆ ವಿಚಾರದಲ್ಲೂ ಕೋರ್ಟ್ ನೀಡಿರುವ ತೀರ್ಪು ಇದೀಗ ಬಹಿರಂಗವಾಗಿದೆ. ಕಾಂಗ್ರೆಸ್ ಪಕ್ಷದ ಸಜ್ಜನ್ ಕುಮಾರ್, ಜಗದೀಶ್ ಟೈಟ್ಲರ್, ಕಮಲನಾಥ್ ಸೇರಿದಂತೆ ಹಲವರು ಆರೋಪ ಎದುರಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಿಖ್ ಗಲಭೆಯಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಇಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.