ಮಹಾರಾಷ್ಟ್ರದಲ್ಲಿ ಮಳೆ; ಕೃಷ್ಣಾ ನದಿಗೆ ನೆರೆ
Team Udayavani, Jul 3, 2019, 3:00 AM IST
ಬೆಂಗಳೂರು/ಹುಬ್ಬಳ್ಳಿ: ಮಡಿಕೇರಿ, ಸಿದ್ದಾಪುರ, ಶಿರಸಿ, ಚಿಕ್ಕಮಗಳೂರು ಸೇರಿ ರಾಜ್ಯದ ಕೆಲವೆಡೆ ಮಳೆಯಾಗುತ್ತಿದೆ. ಈ ಮಧ್ಯೆ, ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ ನೆರೆ ಬಂದಿದ್ದು, ಅಥಣಿ ತಾಲೂಕಿನ ಸಂಪರ್ಕ ಸೇತುವೆ ಮುಳುಗಡೆಯಾಗಿದೆ.
ನೆರೆಯ ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಗೆ ಮಂಗಳವಾರ 25,300 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಪರ್ಕ ಸೇತುವೆ ಮುಳುಗಿದ್ದು, ಮಂಗಳವಾರದಿಂದ ರಬಕವಿ-ಬನಹಟ್ಟಿ ಹಾಗೂ ಜಮಖಂಡಿ ತಾಲೂಕುಗಳಿಂದ ಅಥಣಿ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಲು ಬೋಟ್ ಸೇವೆ ಆರಂಭಿಸಲಾಗಿದೆ.
ಹಿಪ್ಪರಗಿ ಜಲಾಶಯಕ್ಕೆ ಮಂಗಳವಾರ ಬೆಳಗ್ಗೆ 25,300 ಕ್ಯೂಸೆಕ್ ನೀರು ಹರಿದು ಬಂದಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಯಿಂದ ಹರಿದು ಬಿಡಲಾಗುತ್ತಿದೆ. ಇದೇ ವೇಳೆ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಚಿಕ್ಕಮಗಳೂರು, ಸಾಗರ, ತೀರ್ಥಹಳ್ಳಿ, ಆಗುಂಬೆ, ಮಡಿಕೇರಿ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯ ಹಲವೆಡೆ ಮಂಗಳವಾರ ಮಳೆಯಾಗಿದೆ.