ನಾಳೆ, ನಾಡಿದ್ದು ಮಳೆ ಸಾಧ್ಯತೆ
ರಾಜ್ಯದಲ್ಲಿ ಫೋನಿ ಚಂಡಮಾರುತ ಪ್ರಭಾವ ಕಡಿಮೆ
Team Udayavani, Apr 29, 2019, 6:30 AM IST
ಬೆಂಗಳೂರು/ಚೆನ್ನೈ: ಒಂದೆಡೆ ತಮಿಳುನಾಡಿಗೆ ಫೋನಿ ಚಂಡಮಾರುತ ಪ್ರಭಾವದಿಂದ ಕರ್ನಾಟಕದ ಕರಾವಳಿ, ಒಳನಾಡಿನ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಅದರ ಜತೆಗೆ ಕಲಬುರಗಿ, ರಾಯಚೂರುಗಳಲ್ಲಿ ತಾಪಮಾನ 44 ಡಿಗ್ರಿ ಸೆಲಿÏಯಸ್ ದಾಟಿ, ನೆಲ ಕಾದ ಹೆಂಚಿನಂತಾಗಿದೆ. ಈ ನಡುವೆ, ಸವಣೂರು, ಹಾವೇರಿ, ಹಳಿಯಾಳ, ಸುಳ್ಯ ಸೇರಿದಂತೆ ರಾಜ್ಯದ ಕೆಲವೆಡೆ ಭಾನುವಾರ ಮಳೆಯಾಗಿದೆ. ಮುಂದಿನ ಎರಡು ದಿನಗಳ ಕಾಲ ರಾಜ್ಯದ ಒಳನಾಡು, ಕರಾವಳಿಯ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ.
ಆದರೆ, ಹಿಂದೂ ಮಹಾಸಾಗರ ಹಾಗೂ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಫೋನಿ ಚಂಡಮಾರುತ ಉತ್ತರದ ಕಡೆಗೆ ಚಲಿಸುತ್ತಿದೆ. ಹೀಗಾಗಿ, ರಾಜ್ಯದ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುವುದಿಲ್ಲ.
ಆದರೂ, ಕರಾವಳಿ ಹಾಗೂ ಒಳನಾಡಿನ ಕೆಲವೆಡೆಗಳಲ್ಲಿ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ. ಆಂಧ್ರಪ್ರದೇಶ ಹಾಗೂ ತೆಲಂಗಾಣ ಭಾಗಗಳಲ್ಲಿ ತಾಪಮಾನ ಹೆಚ್ಚಾಗಿರುವುದರಿಂದ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆಯಿದೆ. ಮೇ ಮೊದಲ ವಾರದಲ್ಲಿ ದಕ್ಷಿಣ ಒಳನಾಡಿನ ಕೆಲಭಾಗಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎಂದಿದ್ದಾರೆ.
ಕಲಬುರಗಿಯಲ್ಲಿ ಶನಿವಾರ ರಾಜ್ಯದಲ್ಲಿಯೇ ಅತ್ಯಧಿಕ ತಾಪಮಾನ 44.3 ಡಿಗ್ರಿ ಸೆಲಿÏಯಸ್ ದಾಖಲಾಗಿತ್ತು.