ರಮೇಶ ನನ್ನ ಸಂಪರ್ಕಕ್ಕೂ ಸಿಕ್ಕಿಲ್ಲ: ಲಖನ್ ಜಾರಕಿಹೊಳಿ
Team Udayavani, Jan 20, 2019, 12:15 AM IST
ಬೆಳಗಾವಿ: ರಮೇಶ ಜಾರಕಿಹೊಳಿ ಕಾಂಗ್ರೆಸ್ನಲ್ಲೇ ಉಳಿಯಬೇಕೆಂದು ನಾನು ಕೂಡ ಹೆಚ್ಚಿನ ಪ್ರಯತ್ನ ನಡೆಸಿದ್ದು, ಆದರೆ ಈ ಬಗ್ಗೆ ಮಾತನಾಡಲು ಅವರು ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಲಖನ್ ಜಾರಕಿಹೊಳಿ ಹೇಳಿದರು.
ಉದಯವಾಣಿ ಜತೆ ಮಾತನಾಡಿದ ಅವರು, ಕಳೆದ 15 ದಿನಗಳಿಂದ ಅವರು ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ. ಎರಡು ದಿನಗಳ ಹಿಂದೆ ಬೆಳಗಾವಿಗೆ ಸಿದ್ದರಾಮಯ್ಯ ಬಂದಾಗ ಅವರೂ ಸಹ ದೂರವಾಣಿಯಲ್ಲಿ ಸಂಪರ್ಕ ಮಾಡಲು ಬಹಳ ಪ್ರಯತ್ನ ಮಾಡಿದರು. ಆದರೆ ಸಾಧ್ಯವಾಗಲಿಲ್ಲ ಎಂದರು.
ರಮೇಶ ಜಾರಕಿಹೊಳಿ ಯಾವ ಕಾರಣಕ್ಕೆ ಕಾಂಗ್ರೆಸ್ ಜೊತೆ ಮುನಿಸಿಕೊಂಡಿದ್ದಾರೆ ಎಂಬುದು ನನಗೆ ನಿಖರವಾಗಿ ಗೊತ್ತಿಲ್ಲ. ಆದರೆ ಅಸಮಾಧಾನವಾಗಿದೆ. ಇದನ್ನು ಸರಿಪಡಿಸಿ ಅವರನ್ನು ಕಾಂಗ್ರೆಸ್ದಲ್ಲಿ ಉಳಿಸಿಕೊಳ್ಳಲು ಈಗಲೂ ನಾವು ಪ್ರಯತ್ನ ಮಾಡುತ್ತಲೇ ಇದ್ದೇವೆ ಎಂದು ಹೇಳಿದರು