ರಾಯಣ್ಣ ಬ್ರಿಗೇಡ್ ತಾಕತ್ತು ತೋರಿಸೋಣ; ಮತ್ತೆ BSYಗೆ ಸೆಡ್ಡು!
Team Udayavani, Feb 11, 2017, 1:44 PM IST
ಬೆಂಗಳೂರು: ರಾಯಣ್ಣ ಬ್ರಿಗೇಡ್ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ನಡುವಿನ ಜಟಾಪಟಿ ತಾರಕಕ್ಕೇರಿದಾಗ, ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿವಾಸಕ್ಕೆ ಕರೆಯಿಸಿ ಸಂಧಾನ ಸಭೆ ನಡೆಸಿದ್ದರು. ಇದೀಗ ಮತ್ತೆ ಬಿಎಸ್ ಯಡಿಯೂರಪ್ಪಗೆ ಸೆಡ್ಡು ಹೊಡೆದಿರುವ ಈಶ್ವರಪ್ಪ ರಾಯಣ್ಣ ಬ್ರಿಗೇಡ್ ತಾಕತ್ತು ತೋರಿಸೋಣ ಎಂದು ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ.
ಶನಿವಾರ ನಗರದಲ್ಲಿ ನಡೆದ ರಾಯಣ್ಣ ಬ್ರಿಗೇಡ್ ಸಭೆಯಲ್ಲಿ ಮಾತನಾಡಿದ ಅವರು, ಕೆಲವರು ರಾಯಣ್ಣ ಬ್ರಿಗೇಡ್ 7 ತಿಂಗಳಿಗೆ ಕೊನೆಯಾಯ್ತು ಅಂತ ಮಾತನಾಡುತ್ತಿದ್ದಾರೆ. ಹಾಗಾಗಿ ರಾಯಣ್ಣ ಬ್ರಿಗೇಡ್ ತಾಕತ್ತು ಏನು ಎಂದು ತೋರಿಸಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಗೂ, ಬ್ರಿಗೇಡ್ ಗೂ ಯಾವುದೇ ಸಂಬಂಧವಿಲ್ಲ. ರಾಯಣ್ಣ ಬ್ರಿಗೇಡ್ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲಿದೆ. ಇದೇ ಮಾತನ್ನು ಅಮಿತ್ ಶಾ ಕೂಡಾ ಹೇಳಿದ್ದಾರೆ. ಬಿಎಸ್ ವೈ ಕೂಡಾ ಒಪ್ಪಿದ್ದಾರೆ ಎಂದು ಹೇಳಿದರು.
ರಾಯಣ್ಣ ಬ್ರಿಗೇಡ್ ಗೆ ಯಾವುದೇ ಬ್ರೇಕ್ ಬಿದ್ದಿಲ್ಲ, ಅದು ಸಕ್ರಿಯವಾಗಿದೆ. ಅದರ ಸಭೆಯಲ್ಲಿ ನಾನು ಪಾಲ್ಗೊಳ್ಳುತ್ತೇನೆ ಎಂದು ಹೇಳುವ ಮೂಲಕ ಬಿಜೆಪಿಯೊಳಗಿನ ಮುಸುಕಿನ ಗುದ್ದಾಟ ಮುಂದುವರಿದಂತಾಗಿದೆ.