ತಪ್ಪು ಮಾಡಿದ್ದರೆ ಶಿಕ್ಷೆಗೆ ಸಿದ್ಧ, ಸವಾಲಿನಿಂದ ಹಿಂದೆ ಸರಿಯೋಲ್ಲ: ಡಿಕೆ ಶಿವಕುಮಾರ್
ನಾನು ಯಾವತ್ತೂ ಪಕ್ಷಕ್ಕೆ ದ್ರೋಹ ಎಸಗಿದವನಲ್ಲ. ಹೀಗಾಗಿ ನನಗೆ ಇಂದು ಈ ಗೌರವ ದೊರಕಿದೆ ಎಂದು ಹೇಳಿದರು
Team Udayavani, Jul 2, 2020, 2:02 PM IST
ಬೆಂಗಳೂರು:ನನ್ನ ರಾಜಕೀಯ ಜೀವನದಲ್ಲಿ ಹಲವಾರು ಏಳು, ಬೀಳುಗಳನ್ನು ಕಂಡಿದ್ದೇನೆ. ಸುಖ, ಸಂತೋಷ, ನೋವನ್ನು ಅನುಭವಿಸಿದ್ದೇನೆ. ಅದೇ ರೀತಿ ನಾನು ಯಾವು ತಪ್ಪು ಮಾಡಿಲ್ಲ, ಒಂದೊಮ್ಮೆ ತಪ್ಪು ಎಸಗಿದ್ದರೆ ಅದಕ್ಕೆ ತಕ್ಕ ಶಿಕ್ಷೆ ಅನುಭವಿಸಲು ಸಿದ್ಧ ….ಇದು ಕೆಪಿಸಿಸಿ ನೂತನ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನುಡಿ.
ಉದ್ಯಾನನಗರಿಯ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷರಾಗಿ ಪ್ರತಿಜ್ಞೆ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಕಿರಿಯ ವಯಸ್ಸಿನಿಂದಲೇ ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಮುಖಂಡನಾಗಿದ್ದೆ. ನಾನು ಪಕ್ಷಕ್ಕಾಗಿ ಹಲವು ರೀತಿಯಲ್ಲಿ ತ್ಯಾಗ ಮಾಡಿದ್ದೇನೆ. ಪಕ್ಷದಿಂದ ನನಗೆ ಅನ್ಯಾಯವಾಗಿರಬಹುದು, ಆದರೆ ನಾನು ಯಾವತ್ತೂ ಪಕ್ಷಕ್ಕೆ ದ್ರೋಹ ಎಸಗಿದವನಲ್ಲ. ಹೀಗಾಗಿ ನನಗೆ ಇಂದು ಈ ಗೌರವ ದೊರಕಿದೆ ಎಂದು ಹೇಳಿದರು.
ನಾನೇನು ಮಾಧ್ಯಮಗಳಲ್ಲಿ ಬಿಂಬಿತವಾಗಿರುವ ಹಾಗೆ ಕನಕಪುರದ ಬಂಡೆ ಅಲ್ಲ, ವಿಧಾನಸೌಧದ ಮೆಟ್ಟಿಲುಗಳ ಚಪ್ಪಡಿ ಕಲ್ಲು ಆಗಲು ಸಿದ್ದನಿದ್ದೇನೆ. ಆ ಕಲ್ಲನ್ನೇ ಮೆಟ್ಟಿಕೊಂಡು ವಿಧಾನಸೌಧಕ್ಕೆ ತೆರಳುವಂತಾದರೆ ಸಾಕು ಅದೇ ನನಗೆ ದೊಡ್ಡ ಸೌಭಾಗ್ಯ ಎಂದು ತಿಳಿಸಿದರು.
ನನ್ನ ರಾಜಕೀಯ ಜೀವನದಲ್ಲಿ ಹಲವಾರು ತಿರುವುಗಳನ್ನು ಕಂಡಿದ್ದೇನೆ. ನನ್ನ ರಾಜಕೀಯ ಜೀವನ ಮುಗಿಸಲು ಎಷ್ಟೆಲ್ಲಾ ಪ್ರಯತ್ನ ನಡೆಯಿತು, ಅದರಿಂದ ನಾನು ಸಾಕಷ್ಟು ಮಾನಸಿಕವಾಗಿಯೂ ಕುಗ್ಗುವಂತಾಗಿತ್ತು. ಆದರೆ ನಾನು ಅದ್ಯಾವುದನ್ನೂ ಲೆಕ್ಕಿಸದೇ ಸವಾಲನ್ನು ಮೆಟ್ಟಿ ನಿಂತು ಪಕ್ಷ ಬೆಳೆಸುವ ಕಾಯಕಕ್ಕೆ ಮುಂದಾಗುವುದೇ ನನ್ನ ಗುರಿಯಾಗಿದೆ ಎಂದರು.