ಸೂಕ್ತ ದಾಖಲೆ ಬಿಡುಗಡೆಗೆ ಆಗ್ರಹ
Team Udayavani, Jul 5, 2020, 7:00 AM IST
ಬೆಂಗಳೂರು: ಕೋವಿಡ್ 19 ನಿಯಂತ್ರಿಸಲು ವೈದ್ಯಕೀಯ ಸಲಕರಣೆ ಖರೀದಿಯಲ್ಲಿ ಅವ್ಯವಹಾರವಾಗಿಲ್ಲ ಎನ್ನುವುದಾದರೆ ಸೂಕ್ತ ದಾಖಲೆ ಬಿಡುಗಡೆ ಮಾಡುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಎಲ್ಲ ವಸ್ತುಗಳ ಖರೀದಿಗೆ ದಾಖಲೆಗಳಿವೆ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿರುವ ಅವರು, ನಿಮ್ಮ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದ್ದಾರೆ.
ಸರ್ಕಾರದ ಬಳಿ ಎಲ್ಲ ದಾಖಲೆ ಇದ್ದರೆ ಅದನ್ನು ಮುಚ್ಚಿಡುತ್ತಿರುವುದು ಏಕೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕೇಳಿ, ನಾನು ಬರೆದ ಪತ್ರಕ್ಕೆ ಉತ್ತರ ನೀಡುವಂತೆ ಹೇಳಿ ಎಂದು ತಿಳಿಸಿದ್ದಾರೆ. ಅಲ್ಲದೆ, ಕೋವಿಡ್ 19 ಚಿಕಿತ್ಸೆ ನೀಡುವಲ್ಲಿ ಅವ್ಯವಹಾರ ಆಗಿಲ್ಲ ಎನ್ನುವುದನ್ನು ತೋರಿಸಲು ಒಬ್ಬ ಸಚಿವರು ಪ್ರವಾಸಕ್ಕೆ ಕರೆದಿದ್ದಾರೆ. ಮತ್ತೂಬ್ಬ ಸಚಿವರಿಗೆ ಆಸ್ಪತ್ರೆ ಹೊಣೆ ಹೊರಲು ಹೇಳಿದ್ದಾರೆ. ಇಬ್ಬರಿಗೂ ಒಂದೇ ಉತ್ತರ.
ದಯವಿಟ್ಟು ರಾಜೀನಾಮೆ ನೀಡಿ ನಾವು ಪ್ರವಾಸವನ್ನು ಮಾಡುತ್ತೇವೆ. ಆಸ್ಪತ್ರೆಯದ್ದಲ್ಲ. ಇಡೀ ರಾಜ್ಯದ ಹೊಣೆ ಹೊರುತ್ತೇವೆ ಎಂದು ಆಗ್ರಹಿಸಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಿದ್ದೇವೆಂದು ಹೇಳಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಸಿದ್ದರಾಮಯ್ಯ ಸವಾಲು ಹಾಕಿದ್ದು, ಎಸ್ಎಸ್ಎಲ್ಸಿ ಪರೀಕ್ಷೆ ಸುಗಮವಾಗಿ ನಡೆದಿವೆ ಎಂದು ಮುಖ್ಯಮಂತ್ರಿಗಳು ಮತ್ತಷ್ಟು ಪರೀಕ್ಷೆಗಳನ್ನು ನಡೆಸಲು ಮುಂದಾಗಿದ್ದಾರೆ.
ಆದರೆ, ಜೂನ್ 15 ರಿಂದ 20ರ ವರೆಗೆ ತಪಾಸಣೆಗೊಳಪಟ್ಟ ಕೋವಿಡ್ 19 ಪಾಸಿಟಿವ್ ಪ್ರಕರಣಗಳ ಸಂಪರ್ಕಕ್ಕೆ ಬಂದವರ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಈ ಸಂದರ್ಭದಲ್ಲಿ ಸೋಂಕಿತರ ಸಂಪರ್ಕಕ್ಕೆ ಯಾವುದೇ ವಿದ್ಯಾರ್ಥಿಗಳು ಬಂದಿಲ್ಲ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಅದಕ್ಕಾಗಿ ಕನಿಷ್ಠ 15 ದಿನ ಕಾಯಬೇಕು ಎಂದು ಹೇಳಿದ್ದಾರೆ.