ಪ್ಯಾಕೇಜ್ ಘೋಷಿಸಲು ಮುಖ್ಯಮಂತ್ರಿಗೆ ಮನವಿ
Team Udayavani, May 17, 2020, 7:28 AM IST
ಬೆಂಗಳೂರು: ರಾಜ್ಯದ ಕಸುಬುದಾರ ವರ್ಗಗಳಿಗೂ ವಿಶೇಷ ಪರಿಹಾರ ಪ್ಯಾಕೇಜ್ ನೀಡಬೇಕು ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ. ವಿಧಾನ ಪರಿಷತ್ ಸದಸ್ಯ ಎಚ್. ಎಂ.ರೇವಣ್ಣ ನೇತೃತ್ವದಲ್ಲಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಪದಾಧಿಕಾರಿಗಳು ಗೃಹ ಕಚೇರಿ “ಕೃಷ್ಣಾ’ದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಬಳಿಕ ಪ್ರತಿಕ್ರಿಯಿಸಿದ ಎಚ್.ಎಂ.ರೇವಣ್ಣ, ಹಲವು ಶ್ರಮಿಕ ವರ್ಗಕ್ಕೆ ಮುಖ್ಯಮಂತ್ರಿಗಳು ಈಗಾಗಲೇ ಪರಿಹಾರ ಪ್ಯಾಕೇಜ್ ಘೋಷಿಸಿದ್ದಾರೆ. ಆದರೆ ಹಲವು ಶ್ರಮಿಕ ವರ್ಗದವರನ್ನು ಕೈಬಿಡಲಾಗಿದೆ. ಕುಂಬಾರರು, ಕಂಬಳಿ ನೇಯುವವರು, ದೇವಸ್ಥಾನಗಳಲ್ಲಿ ವಾದ್ಯ ನುಡಿಸುವವರು, ಅಡುಗೆ ಕೆಲಸಗಾರರು, ಬಡಗಿಗಳು, ಕಮ್ಮಾರರು ಅವಕಾಶ ವಂಚಿತರಾಗಿದ್ದಾರೆ. ಅವರಿಗೂ ಪರಿಹಾರ ನೀಡಲು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಮನವಿ ಮಾಡಲಾಯಿತು ಎಂದು ಹೇಳಿದರು.